ಬೀದರ್: ಪರಿಷತ್ ಚುನಾವಣೆ ಪ್ರಚಾರಕ್ಕೆಂದು ಬೀದರ್ಗೆ ಇಂದು ಮುಂಜಾನೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹಿಳಾ ಪೊಲೀಸ್ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.
ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡ್ತಿದ್ದಾಗ ಗಸ್ತಿನಲ್ಲಿದ್ದ ಮಹಿಳಾ ಪಿಎಸ್ಐ ಅವರ ಗುಸು ಗುಸು ಶಬ್ದ ಕೇಳಿ ಮುಖ್ಯಮಂತ್ರಿ ಆಕ್ರೋಶಗೊಂಡಿದ್ದಾರೆ.
ಅಷ್ಟೇ ಅಲ್ಲದೇ ಈ ಪೊಲೀಸರು ವೇದಿಕೆಯ ಮೇಲೆಯೂ ಸುತ್ತಾಡುತ್ತಿದ್ದರು. ಇದು ತಮ್ಮ ಭಾಷಣಕ್ಕೆ ಅಡ್ಡಿಯಾಗುತ್ತಿರುವುದರಿಂದ ಸಿಟ್ಟುಗೊಂಡ ಸಿಎಂ, ಕಾರ್ಯಕ್ರಮದಿಂದ ಅವರಿಗೆ ಇಲ್ಲಿಂದ ಹೋಗಿ ಎಂದು ಹೇಳಿದ್ದಾರೆ.
ನಮಗೆ ನಿಮ್ಮಗಳ ಅಗತ್ಯವಿಲ್ಲ, ನಮ್ಮ ಕಾರ್ಯಕರ್ತರು ಎಲ್ಲಾ ನೋಡಿಕೊಳ್ಳುತ್ತಾರೆ. ನಮ್ಮದು ಶಿಸ್ತಿನ ಪಕ್ಷ, ನೀವು ಹೊರಕ್ಕೆ ಹೋಗಿ ಎಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆಯೇ ಪಿಎಸ್ಐ ಅವರು ವೇದಿಕೆಯಿಂದ ಕೆಳಕ್ಕೆ ಇಳಿದಿದ್ದಾರೆ.
ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಲು ವೇದಿಕೆ ಬರುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು. ಆ ನಂತರ ಈ ಮಹಿಳಾ ಪಿಎಸ್ಐ ವೇದಿಕೆ ಮೆಟ್ಟಿಲ ಮೇಲೆ ಅನವಶ್ಯಕವಾಗಿ ಸುತ್ತಾಡುತ್ತಿದ್ದರು. ಈ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೊನೆಗೆ ಭಾಷಣದ ವೇಳೆಯಲ್ಲಿ ಪೊಲೀಸರನ್ನೇ ಮುಖ್ಯಮಂತ್ರಿಗಳು ಹೊರಕ್ಕೆ ಹಾಕಿದ್ದಾರೆ.