ಬೆಳಗಾವಿ :ಕಿತ್ತೂರು ಕರ್ನಾಟಕ ಎಂದು ಘೋಷಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ನಾವೆಲ್ಲರು ಅಭಿನಂದಿಸಲೇಬೇಕು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಗಡಿಭಾಗದಲ್ಲಿ ಕನ್ನಡದ ಉಳಿವಿಗೆ, ಕನ್ನಡದ ಬದುಕಿಗೆ ನಿರಂತರವಾಗಿ ಶ್ರಮಿಸುತಿದ್ದಾರೆ. ಕಿತ್ತೂರು ಕರ್ನಾಟಕ ಇವತ್ತು ಘೋಷಣೆಯಾಗುವುದರ ಮುಖಾಂತರ ಎಲ್ಲರ ಅಭಿನಂದನೆಗಳಿಗೆ ಮುಖ್ಯಮಂತ್ರಿಗಳು ಪಾತ್ರರಾಗಿದ್ದಾರೆ. ಬರುವ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಅಖಂಡ ಕರ್ಣಾಟಕದ ಚಿಂತನೆಯ ಚರ್ಚೆಗಳು ಆಗಲಿ ಎಂದು ಬೆಂಗಳೂರು ವಿಭೂತಿಪುರ ವೀರಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಬೆಳಗಾವಿ ನಗರದ ಲಕ್ಷ್ಮಿ ಟೇಕ್ ಡಿ ಯಲ್ಲಿರುವ
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳನ್ನು ಅಭಿನಂದಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೊಟ್ಟೂರು ಜನಕೋಟಿ ಮಠದ ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಹುಕ್ಕೇರಿ ಹಿರೇಮಠ ಎಂದರೆ ಅದು ಕನ್ನಡದ ಮಠವಾಗಿ ಇಂದು ಬೆಳೆದು ನಿಂತಿದೆ. ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಶ್ರೀಮಠ ಮಾಡುತ್ತಿದೆ. ಕಿತ್ತೂರು ಕರ್ನಾಟಕ ಎಂದು ಘೋಷಣೆಯಾದ ತಕ್ಷಣವೇ ಸಂತಸಪಟ್ಟ ವ್ಯಕ್ತಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಎಂದರು.
ಕೆಲೂರಿನ ಡಾ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕನ್ನಡಕ್ಕೆ ಅದ್ಭುತವಾದ ಹಿನ್ನೆಲೆ ಇದೆ. ಕನ್ನಡದ ಉಳಿವಿಗಾಗಿ ನಾವು ಶ್ರಮಿಸಬೇಕಿದೆ ಎಂದರು.
ಗುಳೇದಗುಡ್ಡ ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕರ್ನಾಟಕ ದಲ್ಲಿರುವ ನಮ್ಮೆಲ್ಲ ಸ್ವಾಮಿಗಳಿಗೆ ಸ್ಪೂರ್ತಿ ಎಂದರೆ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು. ಇವತ್ತು ನಾವು ಬಂದು ಶ್ರೀಮಠದ ಗುರುಗಳನ್ನು ಗೌರವಿಸಿದ್ದೇವೆ. ಅವರು ನಮ್ಮ ತಲೆಗೆ
ಕನ್ನಡದ ಪೇಠ ಸುತ್ತಿ ಕನ್ನಡ ಅಭಿಮಾನವನ್ನು ಹೆಚ್ಚುವಂತೆ ಮಾಡಿ, ನಮ್ಮ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಎಲ್ಲಾ ಶಿವಾಚಾರ್ಯರ ಪರವಾಗಿ ಈ ನಾಲ್ವರು ಪರಮಪೂಜ್ಯರು ಬಂದು ಕಿತ್ತೂರು ಕರ್ನಾಟಕದ ಸಂತಸವನ್ನು ಹಂಚಿಕೊಂಡಿದ್ದಾರೆ. ಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನ ಗಮನವನ್ನುಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಅಖಂಡ ಕರ್ನಾಟಕಕ್ಕೆ ನೀಡುತ್ತಾರೆ ಎಂಬ ಭರವಸೆಯ ನಮಗಿದೆ ಎಂದರು.