ನವದೆಹಲಿ: ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೊನೆಗೂ ಇಂದಿನ ರಾಜ್ಯಸಭೆ ಸಂಸತ್ ಕಲಾಪದಲ್ಲಿ ವಾಪಸ್ ಪಡೆಯಲಾಗಿದೆ.
ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದಂತೆ ಈಗ ಕಲಾಪದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಿವಾದಿತ ಮೂರು ಕೃಷಿ ಕಾಯ್ದೆಗಳನ್ನ ವಾಪಸ್ ಪಡೆಯುವ ಸಂಬಂಧ ಬಿಲ್ ಮಂಡಿಸಿದರು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020 ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020 ಅನ್ನ ವಾಪಸ್ ಪಡೆಯುತ್ತಿರುವ ಬಗ್ಗೆ ಲೋಕಸಭೆಗೆ ತಿಳಿಸಿ ಮಾತನಾಡಿದರು.
ಇನ್ನು ರಾಜ್ಯಸಭೆಯಲ್ಲೂ ಕೂಡ ವಿಪಕ್ಷಗಳ ಗದ್ದಲದ ನಡುವೆಯೇ ಮಸೂದೆ ಅಂಗೀಕಾರವಾಗಿದೆ. ಈ ಮೊದಲು ಕಲಾಪವನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಚಳಿಗಾಲದ ಅಧಿವೇಶನವನ್ನು ಸಕ್ರಿಯಗೊಳಿಸಲು ‘ಪ್ರಜಾಪ್ರಭುತ್ವ ಮತ್ತು ಸಂಸದೀಯ ಸ್ಥಳ’ವನ್ನು ಬಳಸಿ ಎಂದು ಸದಸ್ಯರಲ್ಲಿ ಒತ್ತಾಯಿಸಿದರು. ಕೃಷಿ ಕಾನೂನು ರದ್ದತಿ ಮಸೂದೆ ಅಂಗೀಕಾರವಾದ ನಂತರ ರಾಜ್ಯಸಭೆಯನ್ನು ಅರ್ಧ ಗಂಟೆ ಮುಂದೂಡಲಾಗಿದೆ.
Laxmi News 24×7