ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದ ನಿಮಿತ್ಯ ಆಯೋಜನೆ ಮಾಡಿದ್ದ ಚಂಡಿಕಾ ಯಾಗದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿ ಸರಸ್ವತಿ ಮಹಾಮಂಡಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. 9 ದಿನಗಳ ಕಾಲ ನಡೆಯುವ ಭಾವಕ್ಯತೆಯ ಸಂಕೇತವಾಗಿರುವ ಹುಕ್ಕೇರಿ ದಸರಾ ಉತ್ಸವದ ಚಂಡಿಕಾ ಯಾಗದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಮ್ಮ ಪ್ರತಿಯೊಂದು ಕಾರ್ಯಕ್ಕೂ ಸಲಹೆ ನೀಡಿ ತಿದ್ದಿ ಬುದ್ಧಿ ಹೇಳಿ ಹೆಚ್ಚು ಸಾಮಾಜಿಕ ಕಾರ್ಯ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆ ಎಂದರು.
ಇದೇ ವೇಳೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಸೌಮ್ಯ ಸ್ವಭಾವದ ನಾಯಕಿ. ಅವರ ತಾಳ್ಮೆ ಸಾಮಾಜಿಕ ಕಾರ್ಯ ಅನುಪಮವಾದ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮತ್ತು ಬೆಳಗಾವಿ ಗ್ರಾಮೀಣ ಭಾಗದ ಜನರ ಕಷ್ಟದಲ್ಲಿ ಭಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅಧಿಕಾರ ಸಿಗಲಿ ಎಂದು ಹಾರೈಸಿದರು.
ಶ್ರೀ ಸಂಪತ್ತಕುಮಾರ ಶಾಸ್ತ್ರಿಗಳ ವೈದಿಕತ್ವದಲ್ಲಿ ನೂರಾ ಎಂಟು ವಟುಗಳ ವೇದ ಪಠಣದೊಂದಿಗೆ ಚಂಡಿಕಾ ಯಾಗ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಚಿಕ್ಕೋಡಿ ಅಕ್ಷರ ದಾಸೋಹ ಅಧಿಕಾರಿ ಶ್ರಿಶೈಲ ಹಿರೇಮಠ, ಮುರುಗೇಶ್ ಅಥಣಿ ಸುರೇಶ್ ಜಿನರಾಳಿ ಹಾಗೂ ಚನ್ನಪ್ಪ ಗಜಬರ ಉಪಸ್ಥಿತರಿದ್ದರು.