ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ನೀಡುವುದರ ಮೂಲಕವಾಗಿ ಬೆಳಗಾವಿ ಜನ ಬುದ್ಧಿವಂತರು ಎನ್ನುವದನ್ನ ತೋರಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಿಸಿದಂತಾಗಿದೆ. ಬೆಳಗಾವಿ ಜನ ಬುದ್ದಿವಂತರು ಎನ್ನುವುದನ್ನು ಈ ಗೆಲುವು ನೀಡುವ ಮೂಲಕ ತೋರಿಸಿದ್ದಾರೆ. 58 ಸ್ಥಾನಗಳ ಪೈಕಿ 35 ಸ್ಥಾನಗಳಲ್ಲಿ ಬಿಜೆಪಿಗೆ ಗೆದ್ದಿದೆ ಎಂದರು
ಸಂಘ ಪರಿವಾರದವರು ನಗರದ ಮನೆ ಮನೆಗೆ ತೆರಳಿ ನಮ್ಮ ಸರ್ಕಾರ ಜನಪರ ಸೇವೆ ತಿಳಿಸಿಕೊಡುವಲ್ಲಿ ಮುತುವರ್ಜಿ ವಹಿಸಿದ್ದರು. ಇದು ಬಿಜೆಪಿ ಗೆಲುವಿಗೆ ಮೂಲ ಕಾರಣವಾಗಿದೆ. ಹೈಕಮಾಂಡ್ ನಿರ್ದೇಶನ ಮತ್ತು ಜವಾಬ್ದಾರಿ ಹಂಚಿಕೆ ಮಾಡಿದಂತೆ ಸಚಿವರು ಶಾಸಕರು ಹಾಗೂ ಮುಖಂಡರು ವಾರ್ಡ್ಗಳಲ್ಲಿ ಹಗಲಿರುಳು ದುಡಿಯುವ ಮೂಲಕ ಜನರ ಮನೆ – ಮನ ತಲುಪಿದ್ದರಿಂದಲೇ ಗೆಲುವು ಲಭಿಸಿದೆ. ಜನರಿಗೆ ನೀಡಿದ ಆಶ್ವಾಸನೆಯಂತೆ ಅಭಿವೃದ್ಧಿ ಕೈಗೊಳ್ಳುವ ಮೂಲಕ ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂಬುದನ್ನು ಸಾಬೀತು ಮಾಡುವುದಾಗಿ ಕತ್ತಿ ತಿಳಿಸಿದ್ದಾರೆ.ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಗೌಡ ಪಾಟೀಲ್, ತಾಲೂಕಾಧ್ಯಕ್ಷ ರಾಚಯ್ಯ ಹಿರೇಮಠ, ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ್ ಆನಂದ ಗಂಧ, ಕಲಗೌಡ ಪಾಟೀಲ್, ಪರಗೌಡ ಪಾಟೀಲ್, ಪವನ್ ಪಾಟೀಲ್, ರಾಜು ಮುನ್ನೋಳಿ ಶಿವನಗೌಡ ಪಾಟೀಲ್, ನೀಲಪ್ಪ ಕೋಲೆ, ಶಹಜಾನ ಬಡಗಾವಿ, ಗಿರೀಶ್ ಕುಲಕರ್ಣಿ ಇತರರು ಉಪಸ್ಥಿತರಿದ್ದರು.