ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 9 ರಿಂದ ಹತ್ತು ದಿನಗಳ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರವೇ ನಾಳೆ ಬೆಳಗಾವಿಗೆ ಸ್ಥಳಾಂತರಗೊಳ್ಳಲಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 5 ವರ್ಷ ಸತತ ಅಧಿವೇಶನ ನಡೆಸಿದ್ದರು. ಈಗ ಎರಡನೇ ಅವಧಿಯ ಎರಡನೇ ಅಧಿವೇಶನ ಸಿದ್ದರಾಮಯ್ಯನವರದ್ದು ಇದಾಗಿದೆ. ಹೀಗಾಗಿ ಈ ಬಾರಿಯೂ ಅಚ್ಚುಕಟ್ಟಾಗಿ ಬೆಳಗಾವಿ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಧಿವೇಶನಕ್ಕೆ ಕೊನೆ ಹಂತದ ಸಿದ್ಧತೆಯನ್ನು ಡಿಸಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಪರಿಶೀಲನೆ ನಡೆಸಿತು. ಸುವರ್ಣ ವಿಧಾನ ಸೌಧದಲ್ಲಿ ಉಭಯ ಕಲಾಪಗಳ ಸಿದ್ಧತೆ, ಸಿಎಂ, ಸ್ಪೀಕರ್, ಸಚಿವರು, ಶಾಸಕರು, ಸಚಿವಾಲಯ ಮಟ್ಟದ ಅಧಿಕಾರಿಗಳು ಸೇರಿ ಒಟ್ಟು 12000 ಸಿಬ್ಬಂದಿಗಳಿಗೆ ಅಗತ್ಯವಿರೋ ಊಟ, ವಸತಿ ಮತ್ತು ವಾಹನದ ವ್ಯವಸ್ಥೆಯನ್ನ ಒದಗಿಸಲಾಗಿದೆ. ಅದರಲ್ಲೂ ಪ್ರತಿಭಟನೆ, ಹೋರಾಟಗಳಿಗೆ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಅತ್ತ ಭದ್ರತೆಗೆ ಆಗಮಿಸೋ ಪೊಲೀಸರಿಗಾಗಿ ಟೌನ್ ಶಿಫ್ ನಿರ್ಮಿಸಲಾಗಿದೆ.ಸ್ವಯಂ ಡಿಸಿ ಮೊಹಮ್ಮದ್ ರೋಷನ್ ಅವರೇ ಬೆಡ್ ಮೇಲೆ ಮಲಗಿ ಪರಿಶೀಲನೆ ನಡೆಸಿದರು. ಅಧಿವೇಶನದ ಸಿದ್ಧತೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಡಿಸಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.