ಧಾರವಾಡ : ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಇಂದು(ಸೋಮವಾರ) ನಡೆದಿದ್ದು, ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ವೇಳೆ ಸಚಿವ ಸಂತೋಷ್ ಲಾಡ್ ಹಾಗೂ ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ತುಸು ಹೊತ್ತು ಏರು ದ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ನಡೆಯಿತು.
ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎಸ್ಸಿ, ಎಸ್ಟಿ ಸಮಾಜದ ಪರ ದ್ವನಿ ಎತ್ತುತ್ತಿದ್ದೇನೆ ಎಂದು ಎಫ್.ಎಚ್.ಜಕ್ಕಪ್ಪನವರ ಹೇಳಿದರು.
ಈ ಸಮಯದಲ್ಲಿ ಸಭೆಯಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಜಕ್ಕಪ್ಪನವರ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಸಭೆಯಲ್ಲಿ ಮಾತನಾಡಲು ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಸಚಿವ ಲಾಡ್ ತಿಳಿಸಿದರು.
ಅಧಿಕಾರಿಗಳು ಹಾಗು ಶಾಸಕರ ಉಪಸ್ಥಿತಿಯ ನಡುವೆಯು ಎಂಎಲ್ಸಿ ಎಫ್.ಎಚ್.ಜಕ್ಕಪ್ಪನವರ ನಾನು ಸಭೆಯಿಂದ ಹೊರ ನಡೆಯುವುದಾಗಿ ಹೇಳಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ ಲಾಡ್, ಸಭೆಯಿಂದ ಹೊರ ಹೋಗುವಂತೆ ನಾನು ಹೇಳಿಲ್ಲ, ತಮಗೆ ಹೋಗಬೇಕು ಅನಿಸಿದರೆ ಹೋಗಬಹುದು ಎಂದು ಹೇಳಿದರು.
ಗದ್ದಲದ ವಾತಾವರಣ ನಿರ್ಮಾಣವಾಗುವ ಲಕ್ಷಣಗಳ ಗೊಚರಿಸುತ್ತದ್ದಂತೆ ಸಭೆಯಲ್ಲಿದ್ದ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಮಧ್ಯಸ್ಥಿಕೆ ವಹಿಸಿ ವಾಗ್ವಾದ ತಿಳಿಗೊಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಸದ ಕಂಪನಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಡಿಸಿ ಸ್ನೇಹಲ್ ಅವರಿಗೆ ಸಚಿವ ಲಾಡ್ ಸೂಚನೆ ನೀಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗಬಾರದು. ಬೇಸಿಗೆ ಮುಗಿಯುವ ವರೆಗೂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು, ಇಲ್ಲದಿದ್ದರೆ ಅಮಾನತು ಮಾಡಲಾಗುವದು ಎಂದು ಎಚ್ಚರಿಸಿದರು
Laxmi News 24×7