ಕಾರವಾರ: ಕಾರವಾರ-ಗೋವಾ ಗಡಿ ಭಾಗದಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗೋವಾದಿಂದ ಕಾರವಾರಕ್ಕೆ ಸಾಗಿಸಲು ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಮದ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಖಚಿತ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಗುರುವಾರ ಮುಂಜಾನೆ ಸುಮಾರು 6:30ರ ಹೊತ್ತಿಗೆ ಕಾರವಾರ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕಿನ ಮೈಂಗಿಣಿ ಸಮೀಪದ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದರು.
ದಾಳಿಯ ವೇಳೆ ಅರಣ್ಯದ ಗಿಡಗಂಟಿಗಳಲ್ಲಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 5 ನೈಲಾನ್ ಚೀಲಗಳನ್ನು ಅಡಗಿಸಿಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಚೀಲಗಳನ್ನು ತೆರೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ರಾಜ್ಯದ ಮದ್ಯ ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 107 ಲೀಟರ್ ಗೋವಾ ಮದ್ಯ ಹಾಗೂ 12 ಲೀಟರ್ ಬಿಯರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ಇದರ ಒಟ್ಟು ಅಂದಾಜು ಮೌಲ್ಯ 64,480 ರೂಪಾಯಿಗಳಾಗಿದೆ.
ಸದ್ಯ ವಶಪಡಿಸಿಕೊಂಡಿರುವ ಮದ್ಯವನ್ನು ಅಬಕಾರಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದ್ದು, ಈ ಕುರಿತು ಕಾರವಾರ ಉಪ ವಿಭಾಗದ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಅಕ್ರಮ ಸಂಗ್ರಹಣೆಯ ಹಿಂದಿನ ಸಂಪೂರ್ಣ ಜಾಲವನ್ನು ಬಯಲು ಮಾಡಲು ತನಿಖೆಗಳು ನಡೆಸುತ್ತಿದ್ದಾರೆ.
Laxmi News 24×7