ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದೇವಾಲಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿಲ್ಲ. ಕ್ಷೇತ್ರದ ಶಾಸಕನಾದ ನನ್ನ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಇದು ನನಗೆ ಮಾಡಿದ ಅವಮಾನ ಅಲ್ಲ. ಇಡೀ ಕ್ಷೇತ್ರಕ್ಕೆ ಮಾಡಿದ ಅವಮಾನ ಆಗಿದೆ ಎಂದಿದ್ದಾರೆ. ಜಿಲ್ಲಾಧಿಕಾರಿ ಮಾತ್ರವಲ್ಲದೇ ಹೊಳೆನರಸೀಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ವಿರುದ್ಧವೂ ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ.
ಇಬ್ಬರು ಅಧಿಕಾರಿಗಳ ವಿಚಾರವನ್ನು ಹಕ್ಕುಚ್ಯುತಿ ಸಮಿತಿಗೆ ನೀಡುವುದಾಗಿ ಸಭಾಪತಿ ಯು.ಟಿ.ಖಾದರ್ ಅವರು ಭರವಸೆ ನೀಡಿದ್ದಾರೆ. ಕಳೆದ ಮಾ.3 ರಂದು ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವವಿದ್ದು, ಮಾ.2 ರಂದು ರಥೋತ್ಸವಕ್ಕೆ ಬಟ್ಟೆ ಅಲಂಕಾರ ಮಾಡುವ ವಿಚಾರಕ್ಕೆ ರೇವಣ್ಣ ಹಾಗೂ ಸಂಸದ ಶ್ರೇಯಸ್ ಪಟೇಲ್ ನಡುವೆ ಜಟಾಪಟಿ ನಡೆದು ಪ್ರತಿಭಟನೆ ನಡೆಸಲಾಗಿತ್ತು.
ಇದಾದ ಬಳಿಕ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಮಧ್ಯೆಪ್ರವೇಶಿಸಿ ಬಟ್ಟೆ ಬದಲು ಹೂವಿನ ಅಲಂಕಾರ ಮಾಡಿ ರಥೋತ್ಸವ ನಡೆಸುವಂತೆ ಸೂಚಿಸಿದ್ದರು. ಮಾ.3 ರಂದು ಕೇವಲ ಹೂವಿನ ಅಲಂಕಾರದಲ್ಲಿ ರಥೋತ್ಸವ ಜರುಗಿದ್ದು ಡಿಸಿ ವಿರುದ್ಧ ಗರಂ ಆಗಿದ್ದರು. ಈ ವೇಳೆ ರೇವಣ್ಣ ಹಕ್ಕುಚ್ಯುತಿ ಮಂಡಿಸುವುದಾಗಿ ಎಚ್ಚರಿಸಿದ್ದರು.
Laxmi News 24×7