ಬೆಳಗಾವಿ : ಎಪಿಎಂಸಿ ಕಾಯ್ದೆಯಡಿ ಅನುಮತಿ ಇರುವಲ್ಲಿ ಮಾತ್ರವೇ ಹೂವಿನ ಹೊಲಸೇಲ್ ಮಾರುಕಟ್ಟೆ ಮಾಡಲು ಅವಕಾಶವಿದ್ದು, ಅನುಮತಿ ಇಲ್ಲದೆಡೆ ಎಲ್ಲೇ ಮಾರುಕಟ್ಟೆ ಮಾಡಿದರೂ ಅದು ಮಾನ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ನಗರದಲ್ಲಿ ದಂಡು ಮಂಡಳಿಯಿಂದಲೂ ಹೂವಿನ ಮಾರುಕಟ್ಟೆ ಆರಂಭಿಸಲು ಮುಂದಾಗಿದ್ದರಿಂದ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿರುವ ಹಿನ್ನೆಲೆ ಬುಧವಾರ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಂಡುಮಂಡಳಿ ವ್ಯಾಪ್ತಿಯಲ್ಲಿ ಕಳೆದ ವಾರ ಖಾಸಗಿ ಹೂವಿನ ಮಾರುಕಟ್ಟೆ ಆರಂಭಿಸಲು ಮುಂದಾಗಿದ್ದರು. ಯಾವುದೇ ಖಾಸಗಿ ಅಥವಾ ಸರ್ಕಾರಿ ಹೂವಿನ ಮಾರುಕಟ್ಟೆ ಮಾಡಲು ಎಪಿಎಂಸಿ ಕಾನೂನು ಅಡಿಯಲ್ಲಿ ಒಂದು ಪ್ರಕ್ರಿಯೆ ಇದೆ. ಅದರಡಿಯಲ್ಲೇ ಎಲ್ಲವೂ ಆಗಬೇಕು. ಎಪಿಎಂಸಿಯಿಂದಲೇ ಅನುಮತಿ ಸಿಗಬೇಕು. ಅದಿಲ್ಲದೇ ಮಾಡಲು ಬರುವುದಿಲ್ಲ ಎಂದರು.
ಮೂಲತಃ ಎಪಿಎಂಸಿ ಅಡಿಯಲ್ಲಿ ಈಗಾಗಲೇ ಹೂವಿನ ಮಾರುಕಟ್ಟೆ ಇದೆ. ತೋಟಗಾರಿಕೆ ಇಲಾಖೆಯಿಂದ ಹಂಚಿಕೆ ಮಾಡಿರುವ ಹೂವಿನ ಮಾರುಕಟ್ಟೆಯೂ ಇದೆ. ಇದರ ಹೊರತಾಗಿ ದಂಡು ಮಂಡಳಿಯೂ ಹೂವಿನ ಮಾರುಕಟ್ಟೆ ಮಾಡಲು ಹೊರಟಿತ್ತು. ವಾರದಿಂದ ಹೂವಿನ ಮಾರುಕಟ್ಟೆ ಬಗ್ಗೆ ಚರ್ಚೆಯಾಗಿತ್ತು. ಹೀಗಾಗಿ ವ್ಯಾಪಾರಿಗಳನ್ನು ಕರೆದು, ತಿಳಿ ಹೇಳಲಾಗಿದೆ. ಈಗ ದಂಡು ಮಂಡಳಿಯಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದವರಿಗೂ ಎಪಿಎಂಸಿ, ತೋಟಗಾರಿಕೆ ಇಲಾಖೆ ಅಧೀನದಲ್ಲೇ ಉಪ ಮಾರುಕಟ್ಟೆ ಮಾಡಿ ಕೊಡಲಾಗುವುದು. ಇಲ್ಲಿಯೇ ಬಂದು ವ್ಯಾಪಾರ ಆರಂಭಿಸುವಂತೆ ಹೇಳಿದ್ದೇವೆ. ಸದ್ಯಕ್ಕೆ ದಂಡು ಮಂಡಳಿಯ ಮಾರುಕಟ್ಟೆ ಆರಂಭವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Laxmi News 24×7