ಪತಿಯೊಂದಿಗಿನ ಅಕ್ರಮ ಸಂಬಂಧ ಪ್ರಶ್ನಿಸಲು ಮಹಿಳೆ ಮನೆಗೆ ಹೋದ ಅಕ್ಕ-ತಮ್ಮನನ್ನು ಚಾಕುವಿನಿಂದ ಇರಿದು ಅಪ್ರಾಪ್ತ ಬಾಲಕ ಕೊಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಹಾಡಹಗಲೇ ನಡೆದಿದೆ. ತಿಗಳರಪಾಳ್ಯದ ಯಮುನಾ (36) ಮತ್ತು ಈಕೆಯ ಸಹೋದರ ಸುದೀಪ್ (34) ಕೊಲೆಯಾದವರು.
ತನ್ನ ಗಂಡ ಮಲ್ಲೇಶ್ಗೌಡ ಎಚ್ಎಂಟಿ ಲೇಔಟ್ನ ರುಕಿಣಿನಗರದಲ್ಲಿ ವಾಸವಿರುವ ಛಾಯಾ ಎಂಬಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಯಮುನಾ ಅವರಿಗೆ ಅನುಮಾನ ಬಂದಿದೆ. ಈ ಬಗ್ಗೆ ಮಾತನಾಡಲು ಸಹೋದರ ಸುದೀಪ್ನೊಂದಿಗೆ ಯಮುನಾ ಅವರು ಇಂದು ಬೆಳಿಗ್ಗೆ 11.30ರ ಸುಮಾರಿಗೆ ರುಕ್ಮಣ್ಣಿ ನಗರದಲ್ಲಿರುವ ಛಾಯಾ ಮನೆಯ ಬಳಿ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಛಾಯಾ ಹಾಗೂ ಯಮುನಾ, ಸುದೀಪ್ ನಡುವೆ ವಾಗ್ವಾದವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಆ ವೇಳೆ ಮನೆಯಲ್ಲಿದ್ದ ಛಾಯಾ ಅವರ 16 ವರ್ಷದ ಅಪ್ರಾಪ್ತ ಮಗ ಚಾಕು ತೆಗೆದುಕೊಂಡು ಬಂದು ಏಕಾಏಕಿ ಯಮುನಾ ಹಾಗೂ ಸುದೀಪ್ ಮೇಲೆ ಮನಬಂದಂತೆ ಇರಿದಿದ್ದಾನೆ. ಹಲ್ಲೆಯಿಂದ ಇಬ್ಬರೂ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Laxmi News 24×7