ಬೆಂಗಳೂರು: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ವಿದೇಶ ಪ್ರವಾಸದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿರಗುಪ್ಪ ಶಾಸಕ ಬಿಎಂ ನಾಗರಾಜ್, ಆಸ್ಟ್ರೇಲಿಯಾ ನ್ಯೂಜಿಲೆಂಡ್ ಹೋಗಿ ಬಂದೆವು. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನಾವು ಯಾವುದೇ ಅಧ್ಯಯನ ಮಾಡಿಲ್ಲ. ಫ್ಯಾಮಿಲಿ ಟ್ರಿಪ್ ಹೋಗಿದ್ದೆವು. ನಮ್ಮ ಯಾವ ರಾಜಕೀಯ ನಾಯಕರೂ ಕರೆ ಮಾಡಿಲ್ಲ. ಅಲ್ಲಿನ ಕೆಲ ತೋಟಗಳಿಗೆ ಹೋಗಿದ್ದೆವು. ಕೆಲವು ಕಡೆ ನಮಗೆ ಹೋಗೋದಕ್ಕೆ ಅವಕಾಶ ಸಿಗಲಿಲ್ಲಿ. ನಾವು ಅಧಿಕೃತ ಸರ್ಕಾರಿ ಪ್ರವಾಸಕ್ಕೆ ಹೋಗಿಲ್ಲ. ಅದಕ್ಕೆ ಕೆಲವು ಕಡೆ ಅವಕಾಶ ಸಿಕ್ಕಿಲ್ಲ ಎಂದರು.
ಇನ್ನು ಜಗಳೂರು ಶಾಸಕ ದೇವೆಂದ್ರಪ್ಪ ಈ ಕುರಿತು ಪ್ರತಿಕ್ರಿಯಿಸಿ, ಪ್ರವಾಸದ ಜೊತೆಗೆ ಅಧ್ಯಯನಕ್ಕೆ ಹೋಗಿದ್ದೆವು. ಹೈನುಗಾರಿಕೆ, ಕಾನೂನು ಎಲ್ಲದರ ಬಗ್ಗೆ ಅಧ್ಯಯನ ಮಾಡಿದ್ದೇವೆ. ಆ ದೇಶಗಳಲ್ಲಿನ ವ್ಯವಸ್ಥೆ ನಾವು ಅಳವಡಿಸಿಕೊಳ್ಳುವ ಅಗತ್ಯತೆ ಇದೆ. ನಮ್ಮ ಕ್ಷೇತ್ರಗಳಲ್ಲಿ ನಾವು ಅಧ್ಯಯನ ಮಾಡಿಕೊಳ್ಳುತ್ತೇವೆ. ಆಸ್ಟ್ರೇಲಿಯಾಗೆ ಹೋಗಿ ನಾವು ಯಾವ ರಾಜಕೀಯ ಮಾಡೋಕೆ ಆಗುತ್ತೆ? ಇಲ್ಲಿ ಇದ್ರೆನೇ ನಾವು ಯಾವ ರಾಜಕೀಯವೂ ಮಾಡಿಲ್ಲ. ನಮ್ಮ ನಾಯಕರಲ್ಲಿ ಏನೂ ಗೊಂದಲಗಳಿಲ್ಲ. ರಾಜಕೀಯ ಚರ್ಚೆಗೂ ಈ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ. ಟೀ ಕುಡಿಯುವ ಸಮಯದಲ್ಲೂ ರಾಜಕೀಯ ಮಾತಾಡಿಲ್ಲ. ಮೂರು ವರ್ಷದಿಂದ ಇದೇ ಚರ್ಚೆ ಆಗುತ್ತದೆ. ಕುಟುಂಬದ ಜೊತೆಗೆ ಹೋಗಿ ನಾವು ರಾಜಕೀಯ ಮಾಡಲು ಆಗುತ್ತಾ? ನಿಜವಾಗ್ಲೂ ರಾಜಕೀಯ ಮಾಡಲು ಹೋಗಿದ್ರೆ ನಾವು ಮಾಧ್ಯಮಕ್ಕೆ ಸಿಗುತ್ತಿರಲಿಲ್ಲ ಎಂದು ಹೇಳಿದರು.
ಚಾಮರಾಜನಗರ ಪುಟ್ಟರಂಗಶೆಟ್ಟಿ ಮಾತನಾಡಿ, ಹೈನುಗಾರಿಕೆ, ಅಲ್ಲಿನ ರಸ್ತೆಗಳನ್ನ ನೋಡಲು ಹೋಗಿದ್ದೆವು. ಸರ್ಕಾರಕ್ಕೆ ಹೇಗೆ ರಸ್ತೆ ಮಾಡಬೇಕು ಎಂದು ಹೇಳುತ್ತೇನೆ. ರಾಜಕೀಯ ಇಲ್ಲಿ ಬಂದ ಮೇಲೆ ಮಾಡೋದು, ಅಲ್ಲಿ ಹೋಗಿ ರಾಜಕೀಯ ಮಾಡಿಲ್ಲ ಎಂದು ತಿಳಿಸಿದರು.
Laxmi News 24×7