ಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಆಗಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ?ತಿಳಿಸಿದರು.
ಕಾಂಗ್ರೆಸ್ ನಿಂದ ಅಭ್ಯರ್ಥಿ ಘೋಷಣೆ ಆದ ಬಳಿಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಹೆಚ್.ವೈ ಮೇಟಿ ಅವರ 2ನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ ಎಂದರು.
ನಾನು, ಮುಖ್ಯಮಂತ್ರಿಯವರು ಹಾಗೂ ಜಮೀರ್ ಅಹಮದ್, ನಾಸಿರ್ ಹುಸೇನ್, ಸಲೀಂ ಅಹ್ಮದ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜೊತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದು ಶಾಮನೂರು ಅವರ ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಗ್ಗಟ್ಟಿನಿಂದ ಉಪ ಚುನಾವಣೆ ಮಾಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಮಗನ ಬಿ ಫಾರಂ ಅನ್ನು ತಂದೆಯವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರ ಕೈಯಲ್ಲಿ ಕೊಡಲಾಗಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆಗೆ ನಾನು ಹಾಗೂ ಮುಖ್ಯಮಂತ್ರಿಯವರು ತೆರಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ. ಟಿಕೆಟ್ ವಿಚಾರವಾಗಿ ಮಾಧ್ಯಮಗಳು ಮಾಡುತ್ತಿದ್ದ ವಿಭಿನ್ನ ಚರ್ಚೆಗಳಿಗೆ ತೆರೆ ಎಳೆಯಲಾಗಿದೆ. ಹೈಕಮಾಂಡ್ ಟಿಕೆಟ್ ಹಂಚಿಕೆ ಬಗ್ಗೆ ತಡರಾತ್ರಿ ತಿಳಿಸಿತು ಅಂತ ತಿಳಿಸಿದರು.
ಬುಧವಾರ ಶಾಸಕಾಂಗ ಪಕ್ಷದ ಸಭೆಯನ್ನು ನಿಗಧಿ ಮಾಡಲಾಗಿದೆ. ಎಐಸಿಸಿ ಕಾರ್ಯದರ್ಶಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ ಅಂತ ಮಾಹಿತಿ ನೀಡಿದರು. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರು ಸಮಾಧಾನಗೊಂಡಿದ್ದಾರೆಯೇ ಎಂದು ಕೇಳಿದಾಗ, ಅವರುಗಳು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಜನಸಂಖ್ಯೆ ಆಧಾರದ ಮೇಲೆ ಕೇಳುತ್ತಿದ್ದಾರೆ. ಅವರದ್ದು ತಪ್ಪಿಲ್ಲ. ದಿನಾಂಕ ಚೆನ್ನಾಗಿದೆ ಎಂದು ನಾಮಪತ್ರ ಸಲ್ಲಿಕೆ ಮಾಡಿರುವುದಾಗಿ ಮಲ್ಲಿಕಾರ್ಜುನ್ ಅವರು ಹೇಳಿದರು. ನಮಗೂ ನಂಬಿಕೆ ಇದ್ದಂತೆ ಅವರಿಗೂ ಇದೆ. ಪಕ್ಷ ಹೇಳಿದರೆ ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ. ಸಮರ್ಥ್ ಅವರ ತಾಯಿ ಪ್ರಭಾ ಮಲ್ಲಿಕಾರ್ಜುನ ಅವರಿಗೂ ಸಂಸದ ಸ್ಥಾನಕ್ಕೆ ನಿಲ್ಲಲು ಇಷ್ಟ ಇರಲಿಲ್ಲ. ಒತ್ತಾಯದಿಂದ ನಿಲ್ಲಿಸಿದ್ದು. ಮಲ್ಲಿಕಾರ್ಜುನ್ ಅವರಿಗೂ ಇಷ್ಟ ಇರಲಿಲ್ಲ. ಈಗ ಅವರು ಪಕ್ಷದ ಆಸ್ತಿಯಾಗಿ ಬೆಳೆಯುತ್ತಿದ್ದಾರೆ ಎಂದರು.
Laxmi News 24×7