ಬೆಳಗಾವಿ: ಬೆಳಗಾವಿಯಿಂದ ವಿಮಾನ ಸಂಚಾರ ಕಡಿಮೆಯಾಗಿರುವುದನ್ನು ಖಂಡಿಸಿ ವಾಣಿಜ್ಯೋದ್ಯಮ ಸಂಘ ಪ್ರತಿಭಟನೆಗೆ ಮುಂದಾಗಿದ್ದರಿಂದ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ಗುರುವಾರ ಸಂಘದ ಕಚೇರಿಗೆ ಭೇಟಿ ನೀಡಿ ಚರ್ಚಿಸಿದರು.
ಸಂಚಾರ ದಟ್ಟಣೆ ಇದ್ದರೂ ಬೆಳಗಾವಿಯಿಂದ ಸಂಚರಿಸುತ್ತಿದ್ದ ಹಲವಾರು ವಿಮಾನಗಳು ಏಕಾಏಕಿ ರದ್ದಾಗುತ್ತಿರುವುದು ಉದ್ಯಮಗಳ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಜತೆಗೆ ಬೆಳಗಾವಿ ಅಭಿವೃದ್ಧಿಗೆ ಇದು ಹಿನ್ನಡೆಯುಂಟು ಮಾಡುವ ಆತಂಕ ಎದುರಾಗಿತ್ತು.
ಈ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮ ಸಂಘ ನಿರಂತರ ಸಭೆ ನಡೆಸಿ, ತಕ್ಷಣ ವಿವಿಧ ನಗರಗಳಿಗೆ ವಿಮಾನಯಾನ ಪುನಾರಂಭವಾಗದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಹೀಗಾಗಿ, ವಿಮಾನಯಾನ ಅಧಿಕಾರಿಗಳ ತಂಡ ಗುರುವಾರ ವಾಣಿಜ್ಯೋದ್ಯಮ ಸಂಘದ ಕಚೇರಿಗೆ ಆಗಮಿಸಿ ಚರ್ಚೆ ನಡೆಸಿದರು.
ಬೆಂಗಳೂರು, ಮುಂಬೈ, ಚೆನ್ನೈ, ಅಹಮದಾಬಾದ್, ಜೋಧಪುರ ನಗರಗಳಿಗೆ ತುರ್ತಾಗಿ ವಿಮಾನ ಸಂಚಾರ ಅಗತ್ಯವಾಗಿದೆ. ವಾರಾಣಸಿ ಮತ್ತು ಕೊಚ್ಚಿ ನಗರಗಳಿಗೆ ಪ್ರಯಾಣಿಕರ ಸಂಖ್ಯೆ ದೊಡ್ಡದಿದೆ. ಬೆಳಗಾವಿ ರಫ್ತು ಉದ್ಯಮದಲ್ಲಿ ದೊಡ್ಡದಾಗಿ ಬೆಳೆದಿದೆ. ಜಿಎಸ್ಟಿ ಕೊಡುಗೆ ಸಾಕಷ್ಟಿದೆ. ವಿಮಾನ ಸಂಪರ್ಕ ಬಂದ್ ಆದಲ್ಲಿ ಜಿಲ್ಲೆಯ ಅಭಿವೃದ್ಧಿ ಮೇಲೆ ದೊಡ್ಡ ಹೊಡೆತಬೀಳಲಿದೆ ಎಂದು ಸಂಘದ ಪ್ರತಿನಿಧಿಗಳು ಹೇಳಿಕೊಂಡರು.
ಈ ಕುರಿತು ಸುಧೀರ್ಘವಾಗಿ ಚರ್ಚಿಸಿದ ಪ್ರತಿನಿಧಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂಬೈ ವಿಮಾನವನ್ನು ಇಷ್ಟರಲ್ಲೇ ಆರಂಭಿಸಲಾಗುವುದು. ಇತರ ನಗರಗಳಿಗೂ ಸೇವೆ ಆರಂಭಿಸುವ ಕುರಿತು ಮೇಲಧಿಕಾರಿಗಳ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕಾರ್ಯದರ್ಶಿ ಸತೀಶ ಕುಲಕರ್ಣಿ, ಲಘು ಉದ್ಯೋಗ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷ ಸಚಿನ ಸಬ್ನಿಸ, ವಾಣಿಜ್ಯೋದ್ಯಮ ಸಂಘದ ನಿರ್ದೇಶಕರಾದ ವಿಕ್ರಮ ಜೈನ, ಉದಯ ಜೋಶಿ, ಎಂ.ಕೆ.ಹೆಗಡೆ, ಆನಂದ ದೇಸಾಯಿ, ಸಂದೀಪ ಬಾಗೇವಾಡಿ, ಸಂಜಯ ಪೋತದಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಇಂಡಿಗೋ ಸಂಸ್ಥೆಯ ಮನೋಜ ಪ್ರಭು, ವಿಮಾನ ನಿಲ್ದಾಣದ ಸೀನಿಯರ್ ಮ್ಯಾನೇಜರ್ ಮುಖುಲ್ ಶರ್ಮಾ, ಅಸಿಸ್ಟಂಟ್ ಮ್ಯಾನೇಜರ್ ಚೇತನ, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯ ಜಯಸಿಂಗ ರಜಪೂತ, ಬೆಳಗಾವಿ ಡೆವಲಪ್ಮೆಂಟ್ ಕೋರ್ ಗ್ರೂಪ್ ಸದಸ್ಯ ಸತೀಶಕುಮಾರ ಇತರರಿದ್ದರು
Laxmi News 24×7