ಬೆಳಗಾವಿ: ‘ಇತಿಹಾಸದಲ್ಲಿ ‘ವೇಣುಗ್ರಾಮ’ ಎಂದೇ ಹೆಸರಾದ ಬೆಳಗಾವಿಯು ಕನ್ನಡಿಗರ ಉಸಿರು. ಕನ್ನಡಿಗರೇ ಆದ ಕದಂಬರು ಸಮೃದ್ಧ ಸಾಮ್ರಾಜ್ಯ ಕಟ್ಟಿದ್ದೂ ಇದೇ ನೆಲದಲ್ಲಿ. ಕರ್ನಾಟಕ ಏಕೀಕರಣದಲ್ಲೂ ಇಲ್ಲಿನ ಕನ್ನಡಿಗರ ದಿಟ್ಟ ಹೋರಾಟ ಮೈಲಿಗಲ್ಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬಣ್ಣಿಸಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ ಭಾಷಣ ಮಾಡಿದ ಅವರು, ‘ರಾಜ್ಯದ ಏಕೀಕರಣ ಚಳವಳಿಯಲ್ಲಿ ಜಿಲ್ಲೆಯ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ. ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಗಂಗಧರರಾವ್ ದೇಶಪಾಂಡೆ, ಚಿಂಚಲಿಯ ಆರ್.ಎಸ್.ಹುಕ್ಕೇರಿ, ನಾಗನೂರಿನ ಶಿವಬಸವ ಸ್ವಾಮೀಜಿ, ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ, ಚಂಪಾಬಾಯಿ ಭೋಗಲೆ, ಬಸವಲಿಂಗಮ್ಮ ಬಾಳೇಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಹೀಗೆ ಹಲವರನ್ನು ಸ್ಮರಣೆ ಮಾಡುವ ದಿನವಿದು’ ಎಂದರು.
‘ಈ ಭಾಗದ ಏಳು ಜಿಲ್ಲೆಗಳನ್ನು ಸೇರಿಸಿ ‘ಕಿತ್ತೂರು ಕರ್ನಾಟಕ’ ಎಂದು ನಮ್ಮ ಸರ್ಕಾರ ನಾಮಕರಣ ಮಾಡಿದೆ. ಗಡಿ ಕನ್ನಡಿಗರ ಭಾವನಾತ್ಮಕ ಹಾಗೂ ಸ್ವಾಭಿಮಾನದ ಸಂಕೇತವಿದು. ಗಡಿ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದರು.
ಬೆಳಗಾವಿ ಸ್ಮಾರ್ಟ್ಸಿಟಿ’ ಯೋಜನೆ 2016ರಲ್ಲಿ ಆರಂಭವಾಗಿದ್ದು, ₹ 930 ಕೋಟಿ ಅನುದಾನ ನೀಡಲಾಗಿದೆ. ಈವರೆಗೆ ₹ 854 ಕೋಟಿ ಬಿಡುಗಡೆಯಾಗಿದ್ದು, ₹ 761.21 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟು 103 ಕಾಮಗಾರಿ ಕೈಗೆತ್ತಿಕೊಳ್ಳಲಾದ್ದು, 67 ಮುಕ್ತಾಯವಾಗಿವೆ. ₹ 545.38 ಕೋಟಿ ವೆಚ್ಚದ 36 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ’ ಎಂದೂ ಸಚಿವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ವಿವಿಧ ಪೊಲೀಸ್ ತುಕಡಿಗಳು, ಗೃಹರಕ್ಷಕ ದಳ, ಭಾರತ ಸೇವಾದಳ, ಎನ್ಸಿಸಿ, ಎನ್ಎಸ್ಎಸ್ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ನಂತರ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿದ ಎತ್ತಿನ ಗಾಡಿಯ ಮೆರವಣಿಗೆ ಆರಂಭವಾಯಿತು.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಿಗೆ ಸಚಿವ ಗೋವಿಂದ ಕಾರಜೋಳ ಇದೇ ವೇಳೆ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ನಗರ ಪೊಲೀಸ್ ಕಮಿಷನರ್ ಡಾ.ಎಂ.ಬಿ. ಬೋರಲಿಂಗಯ್ಯ ಇದ್ದರು.