Breaking News

ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!

Spread the love

ಬೆಳಗಾವಿ :ಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಪಿಸುವುದಕ್ಕೆ ‘ಸ್ವಾವಲಂಬಿ’ ವೆಬ್​ಸೈಟ್ ವರದಾನವಾಗಿದೆ.

ಈ ವೆಬ್​ಸೈಟ್ ಮೂಲಕವೇ ಭೂಮಿಯ ಮಾಲೀಕರು ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಏಳೇ ದಿನದಲ್ಲಿ ದಾಖಲೆಗಳು ಕೈ ಸೇರಲಿವೆ.

ಈ ವೆಬ್​ಸೈಟ್ ಆರಂಭವಾದಾಗಿನಿಂದ ರಾಜ್ಯಾದ್ಯಂತ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಶೇ. 70ಕ್ಕಿಂತ ಹೆಚ್ಚು ವಿಲೇವಾರಿಯಾಗಿವೆ. ಈ ಮೊದಲು ನಾಡ ಕಚೇರಿಗೆ ಹೋಗಿ ಜಮೀನಿನ 11ಇ, ಪೋಡಿ ಸೇರಿ ಇತ್ಯಾದಿ ಕಾರ್ಯಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆ ಅರ್ಜಿಯು ನಾಡಕಚೇರಿಯಲ್ಲಿ ಪರಿಶೀಲನೆಗೊಳಪಟ್ಟು ಸರತಿಯಲ್ಲಿ ಬೀಳುತಿತ್ತು. ಸರತಿಯಿಂದ ಭೂಮಾಪಕರ ಬಳಿ ಹೋಗುತ್ತಿತ್ತು.

ಭೂಮಾಪಕರು ಜಮೀನನ್ನು ಪರಿಶೀಲಿಸಿ, ನಕ್ಷೆ ಗುರುತಿಸಿ ಅಪ್​ಲೋಡ್ ಮಾಡುತ್ತಿದ್ದರು. ಅಪ್​ಲೋಡ್ ಆದ ದಾಖಲೆಯನ್ನು ತಪಾಸಕರ ಮೂಲಕ ಪರಿಶೀಲಿಸಿದ ಬಳಿಕ ಅಂತಿಮ ಅನುಮೋದನೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ ಒಂದೂವರೆ ತಿಂಗಳಿಂದ ಎರಡು ತಿಂಗಳು ಸಮಯ ಹಿಡಿಯುತ್ತಿತ್ತು. ಆದರೆ, ‘ಸ್ವಾವಲಂಬಿ’ ವೆಬ್​ಸೈಟ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು 7 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ಉದಾಹರಣೆಗೆ ಜಮೀನು ಮಾರಾಟ ಮಾಡುವುದಕ್ಕಾಗಿ ವೆಬ್​ಸೈಟ್​ಗೆ ಸಲ್ಲಿಕೆಯಾಗುವ ಆರ್​ಟಿಸಿಯಲ್ಲಿ ಇರುವ ಹಿಸ್ಸಾ ನಂಬರ್ ನಕ್ಷೆಯ ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ನಾಗರಿಕ ಖಾತೆಯಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಸಾರ್ವಜನಿಕರು ಸದರಿ ನಕ್ಷೆಯನ್ನು ಡೌನ್​ಲೋಡ್ ಮಾಡಿ, ಮಾರಾಟವಾಗಬೇಕಾದ ಭೂಮಿಯನ್ನು ನಿರ್ದಿಷ್ಟ ಅಳತೆ ಗುರುತಿಸಿ ಮತ್ತೆ ಅಪ್​ಲೋಡ್ ಮಾಡಬೇಕು.

ತದನಂತರ ಭೂಮಾಪನ ಇಲಾಖೆ ಅದನ್ನು ಪುನಃ ಪರಿಶೀಲಿಸಿದ ಬಳಿಕ ಅನುಮೋದಿಸಿ, ದೃಢೀಕರಿಸಿ ಮತ್ತೆ ಅಪ್​ಲೋಡ್ ಮಾಡಲಾಗುತ್ತದೆ. ಇದನ್ನು ಪ್ರಿಂಟ್ ಪಡೆದು ಮಾರಾಟಕ್ಕೆ ನೋಂದಣಿ ಮಾಡಿಕೊಡಬಹುದು. ಈ ಪ್ರಕ್ರಿಯೆ ಮುಗಿದ ಬಳಿಕ ಪ್ರತ್ಯೇಕವಾಗಿ ಪಹಣಿ ದೊರೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೋಜಣಿ-ಕಾವೇರಿಗೆ ಲಿಂಕ್: ‘ಸ್ವಾವಲಂಬಿ’ ವೆಬ್​ಸೈಟ್ ಅನ್ನು ಭೂಮಾಪನ ಇಲಾಖೆಯ ‘ಮೋಜಣಿ’ ಹಾಗೂ ಉಪನೋಂದಣಿ ಇಲಾಖೆಯ ‘ಕಾವೇರಿ’ ತಂತ್ರಾಂಶಕ್ಕೆ ಲಿಂಕ್ ಮಾಡಲಾಗಿದೆ.

ಹಿಸ್ಸಾ ನಕಾಶೆ, ಆರ್​ಟಿಸಿ (ಪಹಣಿ) ಹಾಗೂ ನೋಂದಾಯಿತ ಮೊಬೈಲ್ ನಂಬರ್ ಇರುವ ಆಧಾರ್ ಕಾರ್ಡ್ ತಾಳೆಯಾದರೆ ಮಾತ್ರ ಈ ವೆಬ್​ಸೈಟ್​ನಲ್ಲಿ ಅರ್ಜಿಗಳು ಸ್ವೀಕೃತವಾಗುತ್ತವೆ. ಕಡ್ಡಾಯವಾಗಿ ಜಮೀನಿನ ಆರ್​ಟಿಸಿ ನಂಬರ್ ಇದ್ದರೆ ಮಾತ್ರ ಅರ್ಜಿ ಮಾನ್ಯವಾಗುತ್ತದೆ. rdservices.karnataka.gov.in ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the love ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ