ರಬಕವಿ-ಬನಹಟ್ಟಿ : ಹಿಜಾಬ್ ಹಾಗೂ ಕೇಸರಿ ಶಾಲು ಪ್ರಕರಣದ ಹಿನ್ನಲೆಯಲ್ಲಿ ಬನಹಟ್ಟಿಯಲ್ಲಿ ಕಳೆದ ಒಂದು ವಾರದಿಂದ ಬಂದ್ ಆಗಿದ್ದು, ಕಾಲೇಜು ಇಂದು ಬುಧವಾರ ಪೊಲೀಸ್ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಗಿದ್ದು, ಸಮವಸ್ತ್ರ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಯಿತು.
ತಾಲೂಕಿನಲ್ಲಿ ನಡೆದ ಅಹಿತಕರ ಘಟನೆ ಮತ್ತೇ ಸಂಭವಿಸಬಾರದು ಎಂದು ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು ಸೂಕ್ಷ್ಮ ಶಾಲಾ, ಕಾಲೇಜು ಪ್ರದೇಶಗಳಲ್ಲಿ ಅಗತ್ಯ ಬಂದುಬಸ್ತಿಯನ್ನು ನಿಯೋಜನೆ ಮಾಡದೆ. ಅಲ್ಲದೇ ಜಿಲ್ಲಾಧಿಕಾರಿಯವರು ಶಾಲಾ ಕಾಲೇಜಿನ ಸುತ್ತ ಮುತ್ತಲೂ 144 ಕಲಂ ಜಾರಿ ಮಾಡಿದ್ದು ಯಾವುದೇ ಜನ ಶಾಲಾ, ಕಾಲೇಜುಗಳಿಗೆ ಪ್ರವೇಶಿಸುವಂತಿಲ್ಲ.
ಇಂದು ಬುಧವಾರ ಕಾಲೇಜು ಆರಂಭವಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾಲೇಜಿಗೆ ಆಗಮಸಿದ್ದರು. ಕೆಲವರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು ಕೂಡಾ ಅವುಗಳನ್ನು ತೆಗೆದು ಕಾಲೇಜು ಪ್ರವೇಶಿಸಿದರೆ ಕೆಲವರು ಹಿಜಾಬ್ ತೆಗೆಯಲು ನಿರಾಕರಿಸಿದ್ದರಿಂದ ಅವರನ್ನು ಕಾಲೇಜು ಸಿಬ್ಬಂದಿ ಕಾಲೇಜಿಗೆ ಸೇರಿಸಿಕೊಳ್ಳದೇ ವಾಪಸ್ ಮನೆಗೆ ಕಳುಹಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಎಸ್. ಬಿ. ಇಂಗಳೆ, ಡಿವಾಯ್ಎಸ್ಪಿ ಎಂ. ಪಾಂಡುರಂಗಯ್ಯ, ಸಿಪಿಐ ಜೆ. ಕರುಣೇಶಗೌಡ, ಪಿಎಸ್ಐ ಸುರೇಶ ಮಂಟೂರ ಸ್ಥಳಕ್ಕೆ ಬೇಟ್ಟಿ ನೀಡಿ ಪರೀಶೀಲನೆ ನಡೆಸಿದರು.