ಕರೊನಾ ಪಾಸಿಟಿವ್ ಬಂದವರ ಎಸ್ಆರ್ಎಫ್ ಐಡಿ ರಚನೆಯಾಗದ ಪರಿಣಾಮ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಸಿಗದಂತಾಗಿದೆ. ಹಲವು ತಿಂಗಳಿಂದ ಪರಿಹಾರಕ್ಕಾಗಿ ಕುಟುಂಬಗಳು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಬಾಗಿಲು ಬಡಿಯುತ್ತಿದ್ದರೂ ಇತ್ಯರ್ಥ ಕಾಣುತ್ತಿಲ್ಲ.
ಮೊದಲ ಮತ್ತು ಎರಡನೇ ಅಲೆ ಮುಗಿದು ಮೂರನೇ ಅಲೆ ಕಾಲಿಟ್ಟಿದ್ದರೂ ತಾಂತ್ರಿಕ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ನಡೆಯಿಂದ ಬೇಸತ್ತಿರುವ ರಾಜ್ಯದ 1550 ಕುಟುಂಬಗಳು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿವೆ.
ಎರಡನೇ ಅಲೆ ವೇಳೆ ಕೋವಿಡ್ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಮತ್ತು ಎಪಿಎಲ್ ಕುಟುಂಬಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ವಾಗ್ದಾನ ಮಾಡಲಾಗಿತ್ತು. ಅದರಂತೆ ಪರಿಹಾರ ವಿತರಣೆ ಕಾರ್ಯವೂ ನಡೆದಿದೆ. ಆದರೆ, ಹಲವರದ್ದು ಆರ್ಟಿಪಿಸಿಆರ್ನಲ್ಲಿ ಕೋವಿಡ್ ಪಾಸಿಟಿವ್ ಬಂದರೆ, ಕೆಲವರದ್ದು ರ್ಯಾಟ್ನಲ್ಲಿ ಪಾಸಿಟಿವ್ ಬಂದಿತ್ತು. ಇನ್ನೂ ಕೆಲವರದು ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿಲ್ಲ. ಇಂಥವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದು ವೈದ್ಯರಿಗೆ ಸವಾಲಾಗಿತ್ತು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಸೋಂಕಿರುವುದು ದೃಢಪಟ್ಟಿತ್ತು.
ಯಾಕೆ ನೀಡಲಾಗುತ್ತಿಲ್ಲ?: ಆಸ್ಪತ್ರೆಗಳು ವ್ಯಕ್ತಿಯ ಡೆತ್ ಸಮ್ಮರಿಯಲ್ಲಿ ರ್ಯಾಟ್, ಆರ್ಟಿಪಿಸಿಆರ್ನಲ್ಲಿ ಕರೊನಾ ನೆಗಟಿವ್ ಬಂದಿದ್ದರೂ ಸ್ಕಾಯನಿಂಗ್ನಲ್ಲಿ ಪಾಸಿಟಿವ್ ಬಂದಿದೆ ಎಂದು ವಿವರವಾಗಿ ಬರೆದಿದ್ದಾರೆ. ಅರ್ಹ ಕುಟುಂಬಗಳು ಪರಿಹಾರಕ್ಕಾಗಿ ರಾಜ್ಯದ 31 ಜಿಲ್ಲೆ ವ್ಯಾಪ್ತಿಯ ಆರೋಗ್ಯ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಿದರೂ ಪರಿಗಣನೆಯಾಗುತ್ತಿಲ್ಲ.