ಬೆಂಗಳೂರು: ಸ್ನಾನಕ್ಕೆಂದು ಹೋಗಿದ್ದ ತಾಯಿ-ಮಗಳು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
ತಾಯಿ ಮಂಗಳ (35), ಪುತ್ರಿ ಗೌತಮಿ (07) ಸಾವಿಗೀಡಾದವರು.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಈ ದುರಂತ ನಡೆದುಹೋಗಿದೆ. ರಾಮನಗರ ಮೂಲದ ಈ ಕುಟುಂಬ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು.
ಇಂದು ಬೆಳಗ್ಗೆ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ ಮಗುವನ್ನು ಕರೆದುಕೊಂಡು ತಾಯಿ ಸ್ನಾನಕ್ಕೆಂದು ಬಚ್ಚಲಕೋಣೆಗೆ ಹೋಗಿದ್ದರು. ಅಲ್ಲಿ ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಆನ್ ಮಾಡಲಾಗಿತ್ತು.
ಆದರೆ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಉಂಟಾಗಿದ್ದು, ಅದರಿಂದ ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸಾವಿಗೀಡಾಗಿದ್ದಾರೆ. ಮಾಲೀಕರ ಮನೆಯ ಮಹಿಳೆ ಮನೆ ಬಳಿ ಬಂದಾಗ ಇದು ಗಮನಕ್ಕೆ ಬಂದಿತ್ತು.