ರಾಯಚೂರು: ವಿದ್ಯುತ್ಶಕ್ತಿ ತಿದ್ದುಪಡಿ ಮಸೂದೆ 2020 ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಯುನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ, ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತ್ಯೇಕವಾಗಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ನೂತನ ವಿದ್ಯುತ್ಶಕ್ತಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ಖಾಸಗೀಕರಣಗೊಳಿಸಲು ಮುಂದಾಗಿದ್ದು ಖಂಡನೀಯ. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ಕಳೆದ ಎಂಟು ತಿಂಗಳಿನಿಂದ ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ನೂತನ ಕಾಯ್ದೆ ಜಾರಿಯಾಗುವುದರಿಂದ ರೈತರು, ಕೃಷಿ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸಲಿದ್ದು ವಿದ್ಯುತ್ ದರ ಏರಿಕೆಯಾಗಿ ಜನ ಸಾಮಾನ್ಯರಿಗೂ ಹೊರೆಯಾಗಲಿದೆ
.
ದೇಶದ 12 ರಾಜ್ಯಗಳಿಂದ ಲಿಖಿತ ರೂಪದಲ್ಲಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರೂ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ ಎಂದರು.
ಮಸೂದೆಯಿಂದಾಗಿ ರಾಜ್ಯ ವಿದ್ಯುತ್ ನಿಗಮಗಳಿಗೆ ಅಧ್ಯಕ್ಷರ, ಸದಸ್ಯರ ನೇಮಕ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗುತ್ತದೆ. ಇದರಿಂದ ರಾಜ್ಯಗಳ ಮೇಲೆ ಕೇಂದ್ರದ ನೇರ ದಬ್ಬಾಳಿಕೆ ಆಗಲಿದೆ. ರಾಜ್ಯಗಳ ಮೇಲಿನ ಹಕ್ಕು ಮೊಟಕುಗೊಳ್ಳಲಿದೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಜಿಲ್ಲಾಧ್ಯಕ್ಷೆ ಎಚ್. ಪದ್ಮಾ, ಮುಖಂಡ ಡಿಎಸ್ ಶರಣಬಸವ, ಕೆ.ಜಿ. ವೀರೇಶ, ದೇವಮ್ಮ, ಮಹಾದೇವಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಉಮಾದೇವಿ, ರೂಪಾ ಶ್ರೀನಿವಾಸ್, ನರಸಪ್ಪ, ಜಿ.ರಾಮಬಾಬು, ಮಹಾದೇವ ಇದ್ದರು.