ಮೈಸೂರು: ಕಚೇರಿಗೆ ಕೆಲಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರ ಫೋನ್ ನಂಬರ್ ಪಡೆದು ಕಾಮಾಸಕ್ತಿಯಿಂದ ಮಹಿಳೆಯೊಂದಿಗೆ ಮೊಬೈಲ್ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದ ಪಾಲಿಕೆಯ ನೌಕರನೊಬ್ಬನು ಮಹಿಳೆಯರಿಂದಲೇ ಹೊಡೆತ ತಿಂದಿರುವ ಘಟನೆ ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಯಲ್ಲಿ ನಡೆದಿದೆ. ಈ ಸಂಬಂಧ ನೌಕರನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಘಟನೆಯ ವೈರಲ್ ವಿಡಿಯೋಸರ್ಕಾರಿ ಸಿಬ್ಬಂದಿಯಾಗಿ ಸಾರ್ವಜನಿಕರ ಜೊತೆ ಸೌಜನ್ಯ ಮತ್ತು ಉತ್ತಮ ನಡತೆ ಮರೆತ ದ್ವಿತೀಯ ದರ್ಜೆ ಸಹಾಯಕ ವಿಷಕಂಠ ಮಹಿಳೆಯರ ಕೈಯಲ್ಲಿ ಪೆಟ್ಟು ತಿಂದಿದ್ದಾನೆ.
ಘಟನೆಯ ಮತ್ತಷ್ಟು ವಿವರ..ಆಶ್ರಯ ಮನೆಗೆ ಅರ್ಜಿ ಸಲ್ಲಿಸಲು ವಾಸ ದೃಢೀಕರಣ ಪತ್ರ ನೀಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿಷಕಂಠ ಮಹಿಳೆಗೆ ಪೋನ್ ಮಾಡಿ ಕೆಟ್ಟದ್ದಾಗಿ ಮಾತನಾಡಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಮಹಿಳೆ, ಇತರ ಮಹಿಳೆಯರನ್ನು ಕರೆದುಕೊಂಡು ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಗೆ ಬಂದಿದ್ದಾರೆ. ಈ ವೇಳೆ ನೌಕರನನ್ನು ತರಾಟೆಗೆ ತೆಗೆದುಕೊಂಡು, ಗೂಸಾ ನೀಡಿದ್ದಾರೆ. ಈ ಸಂಬಂಧ ಮಹಿಳೆ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನುಚಿತವಾಗಿ ವರ್ತಿಸಿದ ನೌಕರನನ್ನು ಅಮಾನತು ಮಾಡುವಂತೆ ಪಾಲಿಕೆಯ ಆಯುಕ್ತರು ಡಿ.ಸಿ.ಗೆ ಶಿಫಾರಸು ಮಾಡಿದ್ದಾರೆ.