ಬೆಂಗಳೂರು, ಜೂ. 7-ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ ರಾಜ್ಯ ಸರ್ಕಾರಗಳು ಶೇ.30-32 ರಷ್ಟು ಸೆಸ್ ವಿಧಿಸುತ್ತವೆ. ಸೆಸ್ ಪ್ರಮಾಣ ಇಳಿಕೆ ಮಾಡಿದರೆ ಡೀಸೆಲ್, ಪೆಟ್ರೋಲ್ ದರದಲ್ಲಿ ಲೀಟರ್ ಗೆ 3-4 ರೂ. ಇಳಿಕೆಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನರು ಸಂಕಷ್ಡದಲ್ಲಿದ್ದಾರೆ ಎಂದು ಒಂದು ಕಡೆ ಕೋವಿಡ್ ಪ್ಯಾಕೇಜ್ ನೀಡುವ ಸರ್ಕಾರ ಮತ್ತೊಂದು ಕಡೆ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುತ್ತಿಲ್ಲ. ಸಬೂಬು ಹೇಳಿ ತೀರ್ಮಾನ ಮಾಡಿದರೂ ಜನ ಸಹಿಸುತ್ತಾರೆಂಬ ಲೆಕ್ಕಾಚಾರ ಸರ್ಕಾರಕ್ಕೆ ಇರಬೇಕು. ಆದರೆ, ತೈಲ ಬೆಲೆ ಏರಿಕೆಯನ್ನು ಜನರು ಸಹಿಸುವುದಿಲ್ಲ ಎಂದಿದ್ದಾರೆ.
ತೈಲ ಬೆಲೆ ಹೆಚ್ಚಳದ ಹೊರೆ ಕೇವಲ ವಾಹನ ಹೊಂದಿದವರಿಗೆ ಅಷ್ಟೇ ಅಲ್ಲ, ರೈತರಿಂದ ಗ್ರಾಹಕರವರೆಗೂ ಎಲ್ಲರಿಗೂ ದೊಡ್ಡ ಹೊರೆಯಾಗಿದೆ. ಕೃಷಿಕರು ಟ್ರ್ಯಾಕ್ಟರ್ ಹೆಚ್ಚಾಗಿ ಬಳಸುತ್ತಾರೆ. ಗೊಬ್ಬರ, ಬಿತ್ತನೆ ಭೀಜ ಸಾಗಾಣಿಕೆಗೆ ಸರಕು ಸಾಗಾಣಿಕೆ ವಾಹನ ಬಳಸುತ್ತಾರೆ. ಹೀಗೆ ಒಂದಕ್ಕೊಂದು ಸರಪಳಿ ರೀತಿ ಸಂಬಂಧವಿದ್ದು, ತೈಲ ಬೆಲೆ ಏರಿಕೆಯ ಬಿಸಿ ಎಲ್ಲಾ ವರ್ಗದವರಿಗೂ ತಟ್ಟಲಿದೆ. ಈಗಾಗಲೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 99-100 ರೂ.ಆಸುಪಾಸಿನಲ್ಲಿದೆ ಎಂದು ಅವರು ಹೇಳಿದ್ದಾರೆ