ಬೆಂಗಳೂರು : ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಇ ಮೇಲ್ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ದುಷ್ಕರ್ಮಿಗಳು ಶಂಕರ್ ಬಿದರಿ ಅವರ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಇದನ್ನು ನಂಬಿದ ಬಿದರಿ ಅವರ ಸ್ನೇಹಿತರೊಬ್ಬರು 25 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಶಂಕರ್ ಬಿದರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವೇಳೆ ಇ- ಮೇಲ್ ಐಡಿ ಹ್ಯಾಕ್ ಆಗಿರುವುದು ಶಂಕರ್ ಬಿದರಿ ಅವರ ಗಮನಕ್ಕೆ ಬಂದಿದೆ.
ಘಟನೆ ಸಂಬಂಧ ಶಂಕರ್ ಬಿದರಿ ಅವರು, ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇ ಮೇಲ್ ಹ್ಯಾಕ್ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.