ಬೆಂಗಳೂರು, ನ.1- ಮಹದಾಯಿ ವಿವಾದ ಕುರಿತಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಮಹದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಮಾಡಲಾಗಿದೆ. ಮಹಾದಾಯಿ ನದಿ ನೀರಿನ ಹಂಚಿಕೆ ವಿವಾದದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಅಂತಿಮವಾಗಿ ಈ ವಿವಾದವನ್ನು ನ್ಯಾಯಾಲಯವೇ ಇತ್ಯರ್ಥ ಪಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು ಎಂದಿದ್ದಾರೆ.
ಆದರೂ, ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಿದ್ದರೆ ಈ ವಿವಾದ ಶೀಘ್ರ ಇತ್ಯರ್ಥವಾಗುತಿತ್ತು ಎಂದು ಮತ್ತೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಈ ನನ್ನ ಹೇಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದಿನೇಶ್ ಗುಂಡುರಾವ್ ಸ್ಪಷ್ಟ ಪಡಿಸಿದ್ದಾರೆ. ಮಹದಾಯಿ ಇರಬಹುದು, ಕಾವೇರಿ ಇರಬಹುದು ಆಯಾಯ ರಾಜ್ಯದ ರಾಜಕೀಯ ಪಕ್ಷಗಳು ಆ ರಾಜ್ಯದ ಅನುಕೂಲಕ್ಕೆ ತಕ್ಕಂತೆ ನಿಲುವು ತೆಗೆದುಕೊಂಡಿರುತ್ತವೆ ಎಂಬುದು ನನ್ನ ಹೇಳಿಕೆಯಾಗಿತ್ತು ಎಂದಿದ್ದಾರೆ.