ಚಿತ್ರದುರ್ಗ: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಮಾತ್ರ ಅಲ್ಲ ರಾಜ್ಯದೆಲ್ಲೆಡೆ ದ್ವೇಷದ ರಾಜಕಾರಣ ನಡೆಯುತ್ತಿದೆ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚಳವಾಗಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲೆಂದು ಒತ್ತಾಯಿಸಿದರು.
ಬಳ್ಳಾರಿ ಘಟನೆಯಲ್ಲಿ ಗುಂಡು ಹಾರಿಸಿದವರು ಗನ್ಮ್ಯಾನ್ ಅಲ್ಲ. ನನ್ನ ದೃಷ್ಟಿಯಲ್ಲಿ ಅವರು ಸುಪಾರಿ ಕಿಲ್ಲರ್ಸ್ ಎನಿಸಿದ್ದಾರೆ. ಹೀಗಾಗಿ ಶಾಸಕ ಭರತರೆಡ್ಡಿ ಬಂಧನಕ್ಕೆ ಆಗ್ರಹಿಸಿದ್ದೇವೆ ಎಂದರು. ಹಾಗೆಯೇ ಬಳ್ಳಾರಿಯಲ್ಲಿ ಮಾಡಲ್ ಹೌಸ್ಗೆ ಬೆಂಕಿ ಪ್ರಕರಣ ಈ ರೀತಿ ಗೂಂಡಾಗಿರಿ ಸಮಾಜಕ್ಕೆ ಒಳ್ಳೆಯದಲ್ಲ. ಸಮಾಜ ಸೇವೆಯಲ್ಲಿ ಗೂಂಡಾಗಿರಿ ಮಾಡುವ ಜನ ಇರಬಾರದು. ಶಾಸಕರು, ಸಂಸದರು ಶರಣರು, ಸಂತರಂತೆ ಕೆಲಸ ಮಾಡಬೇಕು. ಜನಪ್ರತಿನಿಧಿಗಳಾಗಿ ಚಂಬಲ್ ಕಣಿವೆ ಡಕಾಯಿತರಂತೆ ಮಾಡಬಾರದು ಎಂದು ಕಿಡಿಕಾರಿದರು.
ಇದೇ ವೇಳೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಕೇಳಿಬಂದಿರುವ ಲಂಚಾವತಾರದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡೆಪ್ಯೂಟಿ ಕಮಿಷನರ್ ಒಂದೂವರೆ ಕೋಟಿ ಮಂತ್ರಿಗೆ ಕೊಡುತ್ತೇವೆ ಎಂದಿದ್ದಾರೆ. ಜೊತೆಗೆ ದುಡ್ಡು ಪಡೆಯುವ ವೇಳೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದೂ, ಸಿಕ್ಕಿಬಿದ್ದ ಅಧಿಕಾರಿಗಳು ಮಂತ್ರಿ ಹೆಸರು ಹೇಳಿದ್ದಾರೆ. ಹೀಗಾಗಿ ಅಬಕಾರಿ ಸಚಿವರು ನಿರಪರಾಧಿ ಎಂದು ಸಾಬೀತು ಮಾಡಲಿ, ಇಲ್ಲವಾದಲ್ಲಿ ಮಂತ್ರಿಗಿರಿಗೆ ರಾಜೀನಾಮೆ ನೀಡಲೆಂದು ಒತ್ತಾಯಿಸಿದರು.
Laxmi News 24×7