ನವೆಂಬರ್ 7: ಮಹಾರಾಷ್ಟ್ರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟ ಉತ್ತಮ ಫಲಿತಾಂಶ ಕಂಡುಕೊಂಡಿರುವುದು ಜಾತಿ ಆಧಾರದಲ್ಲಿ ಧ್ರುವೀಕರಣದತ್ತ ಬೊಟ್ಟು ಮಾಡಿದೆ. ಮರಾಠಾ (Maratha) ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗಾರರನ್ನು ನಿಭಾಯಿಸುವಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬ ಭಾವನೆ ಮೂಡಿರುವಾಗಲೇ ಈ ಫಲಿತಾಂಶ ಹೊರಬಿದ್ದಿದೆ.
2359 ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಸೋಮವಾರ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ, ಶಿವಸೇನೆ ಮತ್ತು ಎನ್ಸಿಪಿಯ ಖುಷಿಗೆ ಕಾರಣವಾಗಿದೆ. ಬಿಜೆಪಿ 724 ಗ್ರಾಮ ಪಂಚಾಯತಿಗಳಲ್ಲಿ, ಎನ್ಸಿಪಿ 411 ರಲ್ಲಿ ಗೆದ್ದುಕೊಂಡಿವೆ. ಶಿವಸೇನೆ 263 ಪಂಚಾಯತಿಗಳಲ್ಲಿ ಗೆಲುವು ಸಾಧಿಸಿದೆ. 222 ಗ್ರಾಮ ಪಂಚಾಯತ್ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಆದಾಗ್ಯೂ, ಮಹಾರಾಷ್ಟ್ರದ ಪ್ರತಿಪಕ್ಷಗಳ ಮೈತ್ರಿಕೂಟ ವಿಕಾಸ್ ಅಘಾಡಿ ಪ್ರಭಾವಶಾಲಿಯಾಗಿಲ್ಲ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಏಕೈಕ ಅತಿದೊಡ್ಡ ವಿಜಯಶಾಲಿಯಾಗಿದ್ದು ಬಿಟ್ಟರೆ ಉಳಿದಂತೆ ಎನ್ಸಿಪಿ (ಶರದ್ ಪವಾರ್ ಬಣ) 187 ಗೆದ್ದರೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) 115 ಗ್ರಾಮ ಪಂಚಾಯಿತಿಗಳಲ್ಲಿ ಗೆದ್ದಿದೆ. ಇತರರು 349 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದ್ದಾರೆ.
ಮರಾಠರು vs ಒಬಿಸಿಗಳು
ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು ಸಮುದಾಯಕ್ಕೆ ಮೀಸಲಾತಿ ಪಡೆಯಲು ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟವನ್ನು ವಿಳಂಬಗೊಳಿಸಿದ್ದಕ್ಕಾಗಿ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಮರಾಠ ಸಮುದಾಯ ಕೆಂಗಣ್ಣಿಗೆ ಗುರಿಯಾಗಿದೆ. ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ ಅವರು ಬೇಡಿಕೆಗಾಗಿ ಒತ್ತಾಯಿಸಿ ರಾಜ್ಯವ್ಯಾಪಿ ಆಂದೋಲನದ ಮೂಲಕ ಸರ್ಕಾರವನ್ನು ಮಂಡಿಯೂರಿಸಿದ್ದಾರೆ. ಅಂತಿಮವಾಗಿ, ಕುಣಬಿ (ಹಿಂದುಳಿದ ಜಾತಿ) ಪ್ರಮಾಣಪತ್ರವನ್ನು ನೀಡಬಹುದಾದ ಮರಾಠರನ್ನು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
Laxmi News 24×7