ನವದೆಹಲಿ: ಮಣಿಪುರ ಹಿಂಸಾಚಾರ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು. ”ಪ್ರಧಾನಿ ಮೋದಿ ಮಣಿಪುರವನ್ನು ಬೆಂಕಿಯಲ್ಲಿ ಉರಿಯಲು ಬಯಸುತ್ತಿದ್ದಾರೆ. ಅವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿಲ್ಲ” ಎಂದು ಗಂಭೀರ ಆರೋಪ ಮಾಡಿದ ರಾಹುಲ್, ”ಭಾರತೀಯ ಸೇನೆಯು ಸಹಾಯದಿಂದ ಎರಡೇ ದಿನದಲ್ಲಿ ಹಿಂಸಾಚಾರ ನಿಲ್ಲಿಸಬಹುದು” ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ”ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು. ಕೊನೆಯ ಎರಡು ನಿಮಿಷ ಮಾತ್ರ ಮಣಿಪುರದ ಬಗ್ಗೆ ಪ್ರಸ್ತಾಪಿಸಿದರು” ಎಂದು ಟೀಕಿಸಿದರು.
”ಭಾರತದ ಪ್ರಧಾನಿ ತಮಾಷೆ ಮಾಡಬಾರದು. ಅವರಿಗೆ ಮಾತನಾಡಲು ನಾನು ಅಥವಾ ಕಾಂಗ್ರೆಸ್ ವಿಷಯವಾಗಿರಲಿಲ್ಲ. ಮಣಿಪುರ ಪ್ರಮುಖ ವಿಷಯವಾಗಿತ್ತು. ಮಣಿಪುರದಲ್ಲಿ ಏನಾಗುತ್ತಿದೆ ಮತ್ತು ಅದನ್ನು ಏಕೆ ನಿಲ್ಲಿಸಲಾಗುತ್ತಿಲ್ಲ ಎಂಬುದೇ ಮುಖ್ಯ ವಿಷಯ. ರಾಜಕೀಯ ಬದಿಗಿಟ್ಟು ಪ್ರಧಾನಿ, ರಾಜಕಾರಣಿಯಾಗಿ ಮಾತನಾಡದೇ ಜನರ ಪರವಾಗಿ ಮಾತನಾಡಬೇಕು” ಎಂದರು.