ಬೆಂಗಳೂರು: ಅಗ್ನಿಪಥ್ ಯೋಜನೆಯಡಿ ಬೆಂಗಳೂರಿನ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ನಲ್ಲಿ(ಉತ್ತರ) ಮೊದಲ ಬ್ಯಾಚಿನ 113 ಅಗ್ನಿವೀರರು ತರಬೇತಿ ಪೂರ್ಣಗೊಳಿಸಿದ್ದಾರೆ.
ಕೇಂದ್ರ ಸಶಸ್ತ್ರ ಪಡೆಗಳ ಮೂರು ಸೇವೆಗಳಿಗೆ ಸೈನಿಕರ ನೇಮಕಾತಿಗಾಗಿ 2022ರ ಜೂನ್ 16ರಂದು ಭಾರತ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಅನುಮೋದನೆಗೊಳಿಸಿತ್ತು.
ಯೋಜನೆಯ ಭಾಗವಾಗಿ ಇದೇ ವರ್ಷ ಜನವರಿ 2023 ರಿಂದ ಪ್ರಾರಂಭವಾದ ತರಬೇತಿಯಲ್ಲಿ ಆಗಸ್ಟ್ 5 ರ ವರೆಗೆ 85 ಅಗ್ನಿವೀರರು (ಎಂಟಿ) ಉತ್ತೀರ್ಣರಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿರುವ ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್ (ಉತ್ತರ) ಭಾರತೀಯ ಸೇನೆಗಾಗಿ ಅನಿಮಲ್ಸ್ ಮತ್ತು ಸ್ಟೋರ್ ಹ್ಯಾಂಡ್ಲರ್ಗಳು, ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್ ಡ್ರೈವರ್ಗಳು ಸೇರಿದಂತೆ ವಿವಿಧ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾಗಿದೆ.
‘ಇಮಾಂದಾರ್, ವಫಾದಾರ್ ಮತ್ತು ಬಹಾದ್ದೂರ್’ ಸೈನಿಕ ನೀತಿ: ಆರ್ಮಿ ಸರ್ವಿಸ್ ಕಾರ್ಪ್ಸ್ ಸೆಂಟರ್(ಉತ್ತರ)- 1 ಎಟಿಸಿಯ ಕಮಾಂಡೆಂಟ್, ಬ್ರಿಗೇಡಿಯರ್ ತೇಜ್ಪಾಲ್ ಸಿಂಗ್ ಮಾನ್ ಶನಿವಾರ ಅಗ್ನಿವೀರರು ತರಬೇತಿ ಮತ್ತು ಉತ್ತೀರ್ಣರಾದವರ ಪರೇಡ್ ವೀಕ್ಷಿಸಿದರು. ಬಳಿಕ ತಮ್ಮ ಮಾತನಾಡಿದ ಅವರು ‘ಇಮಾಂದಾರ್, ವಫಾದಾರ್ ಮತ್ತು ಬಹಾದ್ದೂರ್’ ಸೈನಿಕ ನೀತಿಯನ್ನು ಅಳವಡಿಸಿಕೊಳ್ಳುವಂತೆ ಯುವ ಸೈನಿಕರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಅಗ್ನಿವೀರರ ಪೋಷಕರು ಭಾಗಿಯಾಗಿದ್ದರು. ಇದೇ ವೇಳೆ ರಾಷ್ಟ್ರ ಸೇವೆಗಾಗಿ ಸೇನೆ ಸೇರಲು ಅಸಂಖ್ಯಾತ ಧೀರರನ್ನು ಪ್ರೋತ್ಸಾಹಿಸಿದ ಎಲ್ಲಾ ಪೋಷಕರಿಗೆ ಅವರ ಉದಾತ್ತತೆಯನ್ನು ಗುರುತಿಸುವುದರ ಸಂಕೇತವಾಗಿ ಭಾರತೀಯ ಸೇನೆಯ ಪ್ರತಿಷ್ಠಿತ ಗೌರವ ಪದಕವನ್ನು ನೀಡಿ ಗೌರವಿಸಲಾಯಿತು.
ಬೆಳಗಾವಿಯಲ್ಲಿ ಅಗ್ನಿವೀರರ ಆಕರ್ಷಕ ಪಥಸಂಚಲನ: ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ (ಎಂಎಲ್ಐಆರ್ಸಿ) ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಮಳೆಯಲ್ಲೇ ಆಕರ್ಷಕವಾಗಿ ಜರುಗಿತು. 31 ವಾರ ತರಬೇತಿ ಪಡೆದ 111 ಪ್ರಶಿಕ್ಷಣಾರ್ಥಿಗಳು ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಲು ಅಣಿಯಾದರು. ಮಳೆ ನಡುವೆಯೇ ಅಗ್ನಿವೀರರಿಂದ ನಡೆದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ತರಬೇತಿ ಸಂದರ್ಭದಲ್ಲಿ ತಾವು ಕಲಿತ ವಿವಿಧ ಕೌಶಲಗಳು ಮತ್ತು ಸಾಹಸ ಕಲೆಗಳನ್ನು ಪ್ರದರ್ಶಿಸಿ ತಮ್ಮ ಸಾಮರ್ಥ್ಯವನ್ನು ಪ್ರಶಿಕ್ಷಣಾರ್ಥಿಗಳು ಪ್ರಸ್ತುತ ಪಡಿಸಿದರು. ಪ್ರತಿಭಾವಂತ ಅಗ್ನಿವೀರರಿಗೆ ಇದೇ ವೇಳೆ ಪ್ರಶಸ್ತಿ ಫಲಕಗಳನ್ನು ವಿತರಿಸಲಾಯಿತು. ಅಕ್ಷಯ ಧೀರೆ ಹಾಗೂ ನಾಯ್ಕ ಯಶವಂತ್ ಗಾಡಗೆ ವಿಕ್ಟೋರಿಯಾ ಕ್ರಾಸ್ ಮೆಡಲ್ ಪ್ರದಾನ ಮಾಡಲಾಯಿತು.