ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ಜಿಲ್ಲೆ ಹಾವೇರಿ. ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ.
ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಪ್ರತಿವರ್ಷ ಇಲ್ಲಿಯ ರೈತರು ಬೆಳೆಗಳಿಗೆ ಬೆಳೆವಿಮೆ ಮಾಡಿಸುತ್ತಾರೆ. ಉತ್ತಮವಾಗಿ ಮಳೆ ಬಂದು ಬೆಳೆ ಬಂದರೆ ಬೆಳೆವಿಮೆ ಬರುವುದಿಲ್ಲ. ಆದರೆ, ಸರಿಯಾಗಿ ಮಳೆಬಾರದೆ ಬೆಳೆಬಾರದ ವರ್ಷಗಳಲ್ಲಿ ಬೆಳೆವಿಮೆ ಸ್ವಲ್ಪಮಟ್ಟಿನ ಸಹಾಯವಾಗುತ್ತೆ.
ಮುಂಗಾರು ಆರಂಭವಾಗುತ್ತಿದ್ದಂತೆ ಬೆಳೆವಿಮಾ ಕಂಪನಿಗಳು ಟೆಂಡರ್ ಹಾಕುವ ಮೂಲಕ ಬೆಳೆವಿಮೆಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ಪ್ರಸ್ತುತ ವರ್ಷ ಹವಾಮಾನ ಆಧಾರಿತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಯಾವುದೇ ಇನ್ಶೂರೆನ್ಸ್ ಕಂಪನಿಗಳು ಮುಂದೆ ಬಂದಿಲ್ಲ. ಈಗಾಗಲೇ ಮುಂಗಾರು ಮಳೆ ವಿಳಂಬದಿಂದ ಕೆಂಗಟ್ಟ ರೈತರಿಗೆ ಬೆಳೆವಿಮೆಗಳು ಟೆಂಡರ್ ಹಾಕಲು ಮುಂದೆ ಬರದಿರುವುದು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಬೆಳೆದ ಅಡಕೆ, ಮಾವು, ಶುಂಠಿ ಸೇರಿ ಮೆಣಸಿನಕಾಯಿ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆವಿಮೆ ಟೆಂಡರ್ ಹಾಕಲು ವಿಮಾ ಕಂಪನಿಗಳು ಮುಂದೆ ಬಂದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಇರುವುದು ವಿಮಾ ಕಂಪನಿಗಳು ಹಿಂದೇಟು ಹಾಕುವುದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.