ಬೆಂಗಳೂರು: ಗ್ಯಾರಂಟಿ ವಿಚಾರದಲ್ಲಿ ಜೆಡಿಎಸ್ ನಿಲುವನ್ನು ಸ್ವಾಗತಿಸಿದ ಮಾತ್ರಕ್ಕೆ ಅದನ್ನು ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಕೋನದಿಂದ ನೋಡಬಾರದು, ಇದು ಮೈತ್ರಿಯ ಸುಳಿವಲ್ಲ, ನಾವು ಜನರ ಪರ ನಿಂತಿದ್ದೇವೆ, ಜೆಡಿಎಸ್ ಕೂಡ ಜನರ ಪರ ನಿಂತಿದೆ ಅಷ್ಟೆ ಇದು ಹೊಂದಾಣಿಕೆಯ ನಿಲುವಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಲಿಲ್ಲ ಎನ್ನುವ ವಿಚಾರದಲ್ಲಿ ನಾವು ಜನರ ಪರವಿದ್ದೇವೆ, ಜೆಡಿಎಸ್ ಕೂಡ ಜನರ ಪರ ಹೋರಾಟ ಮಾಡುತ್ತಿದೆ. ಅವರ ಹೋರಾಟವನ್ನು ನಾವು ಸ್ವಾಗತ ಮಾಡಿದ್ದೇವೆ ಇದರ ಅರ್ಥ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ – ಜೆಡಿಎಸ್ ಹೊಂದಾಣಿಕೆ ಎಂದು ಅಲ್ಲ, ಕಾಂಗ್ರೆಸ್ ನಾಯಕರು ಗ್ಯಾರಂಟಿ ವಿಚಾರದಲ್ಲಿ ಮೋಸ, ಸುಳ್ಳು, ವಂಚನೆ ಮಾಡಿದ್ದಾರೆ ಅದರ ವಿರುದ್ಧವಾಗಿ ಜನರು ನಿಲ್ಲುತ್ತಿದ್ದಾರೆ ಹಾಗಾಗಿ ರಾಜಕೀಯ ಪಕ್ಷಗಳು ನಿಲ್ಲುತ್ತಿವೆ ಎಂದರು.
ಗ್ಯಾರಂಟಿಗಳಿಗೆ ಷರತ್ತನ್ನು ಹಾಕಿ ಬಡವರಿಗೆ ಮಹಿಳೆಯರಿಗೆ ರೈತರಿಗೆ ಪದವೀಧರರಿಗೆ ಮದ್ಯಮ ವರ್ಗದವರಿಗೆ ಕೂಲಿ ಕಾರ್ಮಿಕರಿಗೆ ಎಲ್ಲರಿಗೂ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಿದ್ದಾರೆ. ಇದನ್ನ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಹಾಗೂ ಕಟೀಲ್ ನೇತೃತ್ವದಲ್ಲಿ ಯಶಸ್ವಿಯಾಗಿ ಒಂದು ದಿನದ ಪ್ರತಿಭಟನಾ ಧರಣಿಯನ್ನ ನಡೆಸಿದ್ದೇವೆ. ಆ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದರು.
ಎರಡು ದಿನದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ: ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ಮಾಡುತ್ತಿದ್ದೇವೆ. ನಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಬೇಕು ಮತ್ತು ಸರ್ವಸಮ್ಮತ ಹಾಗೂ ಸಮರ್ಥ ನಾಯಕತ್ವವನ್ನು ಕೊಡಬೇಕು ಎನ್ನುವ ಕಾರಣಕ್ಕಾಗಿ ಪಕ್ಷ ಈಗ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದೆ. ವೀಕ್ಷಕರಾಗಿ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಬಂದಿದ್ದಾರೆ. ಅವರು ಪಕ್ಷದ ಎಲ್ಲ ಹಿರಿಯರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ, ಬಹುತೇಕ ಎರಡು ದಿನದಲ್ಲಿ ಎರಡು ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆ ನಡೆಯಲಿದೆ ಎಂದರು.