ಬೆಂಗಳೂರು: ”ಈ ಸರ್ಕಾರದಲ್ಲಿ ಅಧಿಕಾರಿಗಳೇ ದಲ್ಲಾಳಿಗಳು ಆಗಿದ್ದಾರೆ.
ಸರ್ಕಾರ ಸೇವೆಗೆ ಬಂದವರು ದಲ್ಲಾಳಿ ಸೇವೆ ಮಾಡ್ತಿದ್ದಾರೆ” ಎಂದು ಮಾಜಿ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.
ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ”ಕಾಂಗ್ರೆಸ್ ನವರಿಗೆ ತುಂಬಾ ಪ್ರೀತಿ ಇರೋದು ನನ್ನ ಮೇಲೆ ಹಾಗೂ ಅಶ್ವಥ್ ನಾರಾಯಣ್ ಮೇಲೆ. ಆದರೆ ಬಿಜೆಪಿ ಏನು ನಿದ್ದೆ ಮಾಡ್ತಿಲ್ಲ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಾವು ಕೂಡ ಹೋರಾಟ ಮಾಡೋಕೆ ಸಿದ್ದರಿದ್ದೇವೆ. ಎಲ್ಲೋ ಹೆದರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ. ಬೆಂಗಳೂರಿಗೆ ಕೊಡುಗೆ ಕೊಡೋದು ಬಿಟ್ಟು, ಆರ್ ಆರ್ ನಗರದಲ್ಲಿ ಆಗಬಾರದೆಲ್ಲ ಆಗಿಬಿಟ್ಟಿದೆ. ಅಂದ್ರೆ, ಈ ಎಂಪಿ ಎಲ್ಲಿ ರೀ ಇದ್ರು? 110 ಕೋಟಿ ಅವ್ಯವಹಾರ ಅಂದ್ರಲ್ಲ. ಅವತ್ತು ಯಾಕೆ ಹೇಳಿಲ್ಲ?. ತಮ್ಮ ಲೋಕಾಯುಕ್ತಕ್ಕೆ ದೂರು ಕೊಡೋದು. ಅಣ್ಣ ಅಧಿಕಾರಿಗಳನ್ನು ಅಮಾನತ್ತು ಮಾಡೋದು” ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಎರಡು ದೋಣಿ ಪಾರ್ಟಿ: ಕಾಂಗ್ರೆಸ್ ನಲ್ಲಿನ ಸಿಎಂ ಅಧಿಕಾರ ಹಂಚಿಕೆಯ ಕಥೆ ಮೂಲಕ ಕೌಂಟರ್ ನೀಡಿದ ಮುನಿರತ್ನ ಅವರು, ”ಗ್ಯಾರಂಟಿ ಮಾಡಲು ಸುರ್ಜೇವಾಲ, ವೇಣುಗೋಪಾಲ್ ಬಂದು ಸಭೆ ಮಾಡ್ತಾರೆ. ಅಲ್ಲಿ ಗ್ಯಾರಂಟಿ ಪ್ರಿಂಟ್ ಮಾಡಿ, ಒಬ್ಬರು ಸಹಿ ಮಾಡ್ತಾರೆ. ಆದರೆ ಇನ್ನೊಬ್ಬರು ಸಹಿ ಮಾಡಬೇಕು ಅಂತಾರೆ. ಅಲ್ಲಿ ಶಿವಕುಮಾರ್ ಒಬ್ರು ಇದ್ದು ಸಹಿ ಹಾಕ್ತಾರೆ. ಆದರೆ ಸಿದ್ದರಾಮಯ್ಯ ಇರೋದಿಲ್ಲ. ಕೊನೆಗೆ ಸಿದ್ದರಾಮಯ್ಯ ರನ್ನು ಕರೆಸಿಕೊಂಡು ಅವರಿಂದ ಒಂದು ಸಹಿ ಮಾಡಿ ಅಂತಾರೆ. ಆದರೆ ಸಿದ್ದರಾಮಯ್ಯ ನಾನು ಸಹಿ ಮಾಡಲ್ಲ ಅಂತಾರೆ. ಆಮೇಲೆ ನನ್ನ ಜನರು ಓಡಿಸಿಕೊಂಡು ಬರ್ತಾರೆ ನಾನು ಹಾಕಲ್ಲ ಅಂತಾರೆ. ಆಮೇಲೆ ಅಲ್ಲಿ ಅವರು ಕಂಡಿಷನ್ ಹಾಕ್ತಾರೆ 5 ವರ್ಷ ನಾನೇ ಸಿಎಂ ಅಂತಾ. ಸಿದ್ದರಾಮಯ್ಯ ಮಾತಿಗೆ ವೇಣುಗೋಪಾಲ್, ಸುರ್ಜೇವಾಲ ಒಪ್ಪುತ್ತಾರೆ. ಅಂತಿಮವಾಗಿ ಸಿದ್ದರಾಮಯ್ಯ ಗ್ಯಾರಂಟಿಗೆ ಸಹಿ ಹಾಕ್ತಾರೆ” ಎಂದು ವಿವರಿಸಿದರು.