ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೃಷ್ಠಿ ಚಿದಾನಂದ ಸೊಲೋನಿ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದಾರೆ.
ಸೃಷ್ಠಿ ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಸೈದಾಪುರ ಗ್ರಾಮದವರು. ತಂದೆ ಚಿದಾನಂದ ಸೊಲೋನಿ ರೈತರಾಗಿದ್ದು, ತಾಯಿ ಹೇಮಲತಾ ಗೃಹಿಣಿ ಆಗಿದ್ದಾರೆ. ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಸೃಷ್ಠಿ ಇಂದು ಇಡೀ ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಸೃಷ್ಟಿ ಇತಿಹಾಸ ವಿಷಯದಲ್ಲಿ 100, ಭೂಗೋಳಶಾಸ್ತ್ರ 100, ರಾಜಕೀಯಶಾಸ್ತ್ರ 100, ಅರ್ಥಶಾಸ್ತ್ರ 98, ಕನ್ನಡ 99, ಇಂಗ್ಲೀಷ 97 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿನಿ ಸೃಷ್ಠಿ ಸೊಲೋನಿ ಅವರನ್ನು ಬೆಳಗಾವಿ ಸುದ್ದಿ ಸಂಪರ್ಕಿಸಿದಾಗ ಹರ್ಷ ವ್ಯಕ್ತಪಡಿಸಿದು. ನನಗೆ ಬಹಳ ಖುಷಿ ಆಗುತ್ತಿದೆ. ಕಾಲೇಜಿನ ಪ್ರಾಧ್ಯಾಪಕರಿಗೆ ಮತ್ತು ಪಾಲಕರು ಹಾಗೂ ಕುಟುಂಬಸ್ಥರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ತಂದೆ-ತಾಯಿ ಅಷ್ಟೇನು ಕಲಿತಿಲ್ಲ. ಆದರೂ ನನ್ನ ಕಲಿಕೆಗೆ ಎಲ್ಲ ರೀತಿ ಸಹಕಾರ ನೀಡಿದರು. ನಾನು ಕಲಾ ವಿಭಾಗ ಆಯ್ಕೆ ಮಾಡಿಕೊಂಡಾಗ, ನಿನ್ನ ಇಷ್ಟದಂತೆ ಮಾಡು ಅಂತಾ ಪ್ರೋತ್ಸಾಹಿಸಿದರು. ಮುಂದೆ ಬಿಎ ಸೇರಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತೇನೆ. ಮುಂದೆ ಜಿಲ್ಲಾಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಪರೀಕ್ಷೆ ಸಮೀಪದಲ್ಲಿ ಸಮಯ ಲೆಕ್ಕಿಸದೇ ಓದುತ್ತಿದ್ದೆ. ಇನ್ನುಳಿದಂತೆ 3 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಇವತ್ತು ಇಷ್ಟು ಓದಬೇಕು ಎಂದರೆ ಎಂತದೇ ಪರಿಸ್ಥಿತಿ ಇದ್ದರೂ ಓದಿ ಮುಗಿಸುತ್ತಿದ್ದೆ. ನನ್ನ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಇದೇ ರೀತಿ ನನ್ನ ಗುರಿ ಮುಟ್ಟುವವರೆಗೂ ನಿರಂತರ ಅಧ್ಯಯನ ಮಾಡುವೆ ಎಂದು ಸೃಷ್ಠಿ ತಿಳಿಸಿದರು.
Laxmi News 24×7