ಬೆಳಗಾವಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಸದ್ಯ ಶಾಂತವಾಗಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದ ಪರಿಣಾಮ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿದೆ. ಮುಳುಗಡೆ ಭೀತಿಯಲ್ಲಿದ್ದ ಗೋಕಾಕ, ಹುಕ್ಕೇರಿ, ರಾಮದುರ್ಗ ತಾಲೂಕಿನಲ್ಲಿ ಸದ್ಯ ಪ್ರವಾಹ ಆತಂಕ ದೂರವಾಗಿದೆ.
ಹಿಡಕಲ್, ನವೀಲುತೀರ್ಥ ಜಲಾಶಯದಲ್ಲೂ ನೀರಿನ ಒಳ ಹರಿವು ಕ್ಷೀಣಿಸಿದ್ದು, ಪ್ರವಾಹದಿಂದ ಬಂದ್ ಆಗಿದ್ದ ಸೇತುವೆಗಳು, ರಸ್ತೆಗಳು ಮತ್ತೆ ಆರಂಭಗೊಂಡು ಸಂಚಾರ ಮುಕ್ತವಾಗಿದೆ. ನದಿ ಪಾತ್ರದಲ್ಲಿ ನೆರೆ ತಗ್ಗಿದ್ದು ನದಿ ತೀರದಲ್ಲಿ ಜನರಲ್ಲಿದ್ದ ಆತಂಕ ದೂರವಾಗಿ, ಜನಜೀವನ ಯತಾಸ್ಥಿತಿಗೆ ಮರಳಿದೆ.