ಬೆಳಗಾವಿ, ಏಪ್ರಿಲ್ 17: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಮತದಾನ ಮಾಡಿದ ಪ್ರಮುಖರಲ್ಲಿ ಮೊದಲಿಗರಾಗಿದ್ದು ವಿಶೇಷ.
ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ಎರಡರಲ್ಲಿ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಮಂಗಲ ಅವರು ಮತದಾನ ಮಾಡಿದರು.
ಮತಗಟ್ಟೆ ಆಗಮಿಸುತ್ತಿದ್ದಂತೆ ಮೊದಲಿಗೆ ಮತದಾರರ ಕಾಲು ಮುಗಿದು ಆಶೀರ್ವಾದ ಪಡೆದ ಮಂಗಲ ಅವರು ನಂತರ ಸರತಿ ಸಾಲಿನಲ್ಲಿ ನಿಂತರು. ಮಂಗಲ ಅಂಗಡಿಗೆ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಸಾಥ್ ನೀಡಿದರು.
ದಿವಂಗತ ಅಂಗಡಿ ಸ್ಮರಣೆ:
ಕಳೆದ 15 ದಿನಗಳಿಂದ ಅತ್ಯುತ್ತಮ ಪ್ರಚಾರ ಮಾಡಿದ್ದೇವೆ, ರಾಜ್ಯ, ರಾಷ್ಟ್ರ ನಾಯಕರು ಕ್ಷೇತ್ರಕ್ಕೆ ಬಂದು ನನ್ನ ಪರ ಪ್ರಚಾರ ಮಾಡಿದ್ದಾರೆ.
ಈ ಸಲವೂ ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲುವ ಆತ್ಮವಿಶ್ವಾಸ ನನ್ನಲಿದೆ, ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಚುನಾವಣೆ ಬಂದಿದೆ, ಅವರನ್ನು ಈ ಸಮಯದಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಪತಿಯನ್ನು ನೆನೆದು ಭಾವುಕರಾದರು.
ಪಕ್ಷ ನನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದು, ಗೆಲ್ಲುವ ವಿಶ್ವಾಸ ನನ್ನಲಿದೆ ಎಂದು ಹೇಳಿದರು.
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಜಾಗ್ರತಾ ವಹಿಸಿ ಎಲ್ಲರೂ ಮತದಾನ ಮಾಡಬೇಕು ಎಂದು ಮನವಿ ಮಾಡುತ್ತೇನೆ, ಯಾವುದೇ ಆತಂಕಕ್ಕೆ ಒಳಗಾಗದೇ ಮತದಾನ ಮಾಡಬೇಕು ಎಂದು ಕೋರಿದರು.
ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಮೇ 2 ರಂದು ಫಲಿತಾಂಶ ಹೊರ ಬರಲಿದೆ.
ಬಿಜೆಪಿಯಿಂದ ದಿ.ಸುರೇಶ್ ಅಂಗಡಿ ಅವರ ಪತ್ನಿ ಮಂಗಲ ಸುರೇಶ್ ಅಂಗಡಿ ಅವರು ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.