ಬೆಂಗಳೂರು: ಕೈದಿಗಳ ಜೈಲು ಐಡಿ (ಗುರುತಿನ ಚೀಟಿ)ಯೊಂದಿಗೆ ಆಧಾರ್ ನಂಬರ್ ಜೋಡಿಸುವ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯದ ಜೈಲುಗಳಲ್ಲಿ ಹಿನ್ನಡೆ ಉಂಟಾಗಿದೆ.
ಟ್ರ್ಯಾಕ್ ಆಗುವ ಭಯದಿಂದ ಆಧಾರ್ ನಂಬರ್ ನೀಡದೆ ಕೈದಿಗಳು ಕಳ್ಳಾಟವಾಡುತ್ತಿದ್ದಾರೆ. ಆಧಾರ್ ಲಿಂಕ್ ಕಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರವೇ ಸ್ಪಷ್ಟ ಮಾರ್ಗಸೂಚಿ ರೂಪಿಸಿದರೆ ಸೂಕ್ತ ಎಂದು ಜೈಲಾಧಿಕಾರಿಗಳ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜೈಲಲ್ಲಿರುವ ಕೈದಿಗಳು ಮತ್ತು ಅವರ ಭೇಟಿಗೆ ಬರುವ ಸಂದರ್ಶಕರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿ 2023ರಲ್ಲೇ ಕೇಂದ್ರ ಗೃಹ ಸಚಿವಾಲಯ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುವಂತೆ ಅದೇಶ ಹೊರಡಿಸಿತ್ತು. ಇ-ಪ್ರಿಸನ್ ಪೋರ್ಟಲ್ನಲ್ಲಿ ಕೈದಿಗಳ ಐಡಿ ಹಾಗೂ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಲಿಂಕ್ ಮಾಡಲು ಜೈಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಕುರಿತು ನ್ಯಾಷನಲ್ ಇನ್ಫಾರ್ಮೆಟೆಕ್ ಸೆಂಟರ್ (ಎನ್.ಐ.ಸಿ) ಹಾಗೂ ಇ-ಪ್ರಿಸನ್ ಅಧಿಕಾರಿಗಳು ಜಂಟಿಯಾಗಿ ಪ್ರಮಾಣಿತ ಕಾರ್ಯವಿಧಾನ (ಎಸ್ಓಪಿ) ಸಿದ್ಧಪಡಿಸಿದ್ದಾರೆ. ಹೀಗಿದ್ದರೂ, ಕರ್ನಾಟಕ ಸೇರಿ ಬಹುತೇಕ ರಾಜ್ಯಗಳ ಜೈಲುಗಳಲ್ಲಿ ಕೈದಿಗಳ ಐಡಿಯೊಂದಿಗೆ ಅಧಾರ್ ನಂಬರ್ ಜೋಡಿಸುವ ವ್ಯವಸ್ಥೆ ಜಾರಿಯಾಗಿಲ್ಲ. ಆದರೆ, ಕೈದಿಗಳ ಸಂದರ್ಶನಕ್ಕೆ ಬರುವವರ ಆಧಾರ್ ಅಥವಾ ಬೇರೆ ಗುರುತಿನ ಚೀಟಿ ದೃಢೀಕರಣ ಪದ್ಧತಿ ಅನುಷ್ಠಾನಗೊಂಡಿದೆ. ಸಂದರ್ಶನಕ್ಕೆ ಬರುವ ಬಹುತೇಕರು ಆಧಾರ್ ಸಂಖ್ಯೆಯನ್ನೇ ನೀಡುತ್ತಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
Laxmi News 24×7