ನವದೆಹಲಿ: ‘ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರದಿಂದ ಕಿತ್ತುಹಾಕುವುದರಿಂದ ಮಾತ್ರ ರೈತರಿಗೆ ಲಾಭವಾಗಲಿದೆ. ಮಹಾಪರಿವರ್ತನೆಯೇ ರಾಜ್ಯದ ಬೇಡಿಕೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗೆ ಬಿಜೆಪಿ ಕಾರಣವೆಂದು ಕಿಡಿಕಾರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯವನ್ನು ಬರದಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಸುಳ್ಳು ಭರವಸೆ ನೀಡಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯು ಮಹಾರಾಷ್ಟ್ರದ ರೈತರ ಅತ್ಯಂತ ದೊಡ್ಡ ಶತ್ರು. ರಾಜ್ಯದಲ್ಲಿ 20 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗೆ ಅನುದಾನವನ್ನು ಕಡಿತ ಮಾಡಲಾಗಿದೆ. ನೀರಾವರಿಗೆ ₹20 ಸಾವಿರ ಕೋಟಿ ಕೊಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.