ಹುಬ್ಬಳ್ಳಿ: ಅವಳಿ ನಗರದಲ್ಲಿ ಎಲ್ ಆಯಂಡ್ ಟಿ ಕಂಪನಿಯಿಂದ 24X7 ಕುಡಿಯುವ ನೀರಿನ ಕಾಮಗಾರಿ ಕುಂಟುತ್ತಾ ಸಾಗಿದ್ದು, ನೀರಿನ ಕರ ಬಾಕಿ ವಸೂಲಿ ಸವಾಲಾಗಿದೆ.
ಈ ನಡುವೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ನೀರಿನ ಕರ ಸಂಗ್ರದಲ್ಲಿ ಶೇ 94ರಷ್ಟು ಪ್ರಗತಿ ಸಾಧಿಸಿದೆ.
ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ₹13.1 ಕೋಟಿ ನೀರನ ಕರ ಸಂಗ್ರಹಿಸುವ ಗುರಿ ಇತ್ತು. ಅದರಲ್ಲಿ ಈಗಾಗಲೇ ₹12.18 ಕೋಟಿ ಸಂಗ್ರಹಿಸಲಾಗಿದೆ.
ಅವಳಿ ನಗರದಲ್ಲಿ 1,81,900 ನಳ ಸಂಪರ್ಕಗಳಿವೆ. ಅದರಲ್ಲಿ 1,25,095 ನಳಗಳಿಗೆ ಮೀಟರ್ ಅಳವಡಿಸಲಾಗಿದೆ. ಅಸಲು ಮತ್ತು ಬಡ್ಡಿ ಸೇರಿ ಒಟ್ಟು ₹173.46 ಕೋಟಿ ನೀರಿನ ಕರ ಬಾಕಿ ಇದೆ. ಮಹಾನಗರ ಪಾಲಿಕೆಯಿಂದ ಅಕ್ರಮ ನಳಗಳನ್ನು ಪತ್ತೆ ಮಾಡಲಾಗಿದ್ದು, ಸಕ್ರಮ ಮಾಡಿಕೊಳ್ಳುವಂತೆ ಸೂಚಿಸ ಲಾಗಿದೆ. 50 ಸಾವಿರಕ್ಕೂ ಹೆಚ್ಚು ನಳಗಳಿಗೆ ಈವರೆಗೂ ಮೀಟರ್ ಅಳವಡಿಸಿಲ್ಲ.
100 ಮೀಟರ್ ರೀಡರ್ಗಳು ಮನೆ ಮನೆಗೆ ಹೋಗಿ ನೀರಿನ ಕರ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಎಲ್ ಆಯಂಡ್ ಟಿ ಕಂಪನಿ ಸಹ ಆರು ಗ್ರಾಹಕರ ಸೇವಾ ಕೇಂದ್ರ ತೆರೆದಿದ್ದು, ಸಾರ್ವಜನಿಕರು ಅಲ್ಲಿಯೂ ನೀರಿನ ಕರ ಪಾವತಿಸಬಹುದಾಗಿದೆ.
‘ಸಾರ್ವಜನಿಕರು ಕಡ್ಡಾಯವಾಗಿ ನೀರಿನ ಕರ ಪಾವತಿಸಬೇಕು ಎಂದು ನೆರವು ಸಂಸ್ಥೆಯ 20 ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ಧಾರೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡವರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕವೂ ಮಾಹಿತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಎಂದು ಕೆಯುಐಡಿಎಫ್ಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರತಿಭಾಮಠ.
‘ಹೆಚ್ಚಿನ ಮೊತ್ತ ಬಾಕಿ ಇರುವುದರಿಂದ ಸೌಲಭ್ಯಗಳನ್ನು ಒದಗಿಸಲು ಸಹ ಹಿನ್ನಡೆಯಾಗುತ್ತದೆ. ಸರ್ಕಾರ ನೀರಿನ ಬಾಕಿ ಕರವನ್ನು ಮನ್ನಾ ಮಾಡಿಲ್ಲ. ಎಲ್ಲರೂ ಕಡ್ಡಾಯವಾಗಿ ಪಾವತಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.