ಬೆಳಗಾವಿ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಹಲವು ಅವಾಂತರ ಸೃಷ್ಟಿಸಿದೆ.
ಸತತ ಮಳೆಯಿಂದಾಗಿ ನಗರದ ಹೊರವಲಯದ ಬಸವನ ಕುಡಚಿಯ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ, ಜನರು ಪರದಾಡುವಂತಾಯಿತು. ಕೆಎಲ್ಇ ಸಂಕಲ್ಪ ವೆಲ್ನೆಸ್ ಸೆಂಟರ್ಗೆ ಸಹ ನೀರು ನುಗ್ಗಿದ ಪರಿಣಾಮ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳಿಗೆ ಹಾನಿಯಾಯಿತು.
ಈ ನೀರು ಹೊರಹಾಕಲು ಮಹಾನಗರ ಪಾಲಿಕೆಯವರು ಬುಧವಾರ ಬೆಳಿಗ್ಗೆಯಿಂದ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದು ಕಂಡುಬಂತು.
‘ವಾರದಿಂದ ನಮ್ಮಲ್ಲಿ ಸತತ ಮಳೆಯಾಗುತ್ತಿದೆ. ಈ ಹಿಂದೆ ದೇವರಾಜ ಅರಸ್ ಕಾಲೊನಿಯಿಂದ ಮಳೆನೀರು ನೀರು ಹರಿದುಹೋಗಿ ಬಳ್ಳಾರಿ ನಾಲೆ ಸೇರುತ್ತಿತ್ತು. ಆದರೆ, ಚರಂಡಿಗಳೆಲ್ಲ ಬ್ಲಾಕ್ ಆಗಿದ್ದರಿಂದ ಬಸವನ ಕುಡಚಿಗೆ ನೀರು ನುಗ್ಗಿ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ವ್ಯಾಪಾರಿ ದೇವಪ್ಪ ಕಡೇಮನಿ ಅವಲತ್ತುಕೊಂಡರು.
ಪೀರನವಾಡಿಯಲ್ಲೂ ಸಮಸ್ಯೆ: ಪೀರನವಾಡಿಯ ಸಿದ್ಧೇಶ್ವರ ಗಲ್ಲಿ, ಲಕ್ಷ್ಮಿ ಗಲ್ಲಿ, ಪಾಟೀಲ ಗಲ್ಲಿ, ಮಹಾವೀರ ಗಲ್ಲಿಯಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ್ದ ಮಳೆ ನೀರು ಹೊರಹಾಕಲು ಜನರು ಪ್ರಯಾಸಪಟ್ಟರು.
‘ನಮ್ಮ ಮನೆಗೆ ನೀರು ನುಗ್ಗಿ ತೊಂದರೆಯಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ಪಟ್ಟಣ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.