ಬೆಳಗಾವಿ: ಬಡತನದಿಂದ ಬಳಲುತ್ತಿದ್ದ ಎರಡು ವರ್ಷದ ಹೆಣ್ಣು ಮಗುವಿನ ಹೃದಯ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ರೋಟರಿ ಕ್ಲಬ್ ಆಫ್ ಬೆಳಗಾವಿ ದಕ್ಷಿಣ ಪದಾಧಿಕಾರಿಗಳು ‘ಗಿಫ್ಟ್ ಆಫ್ ಲೈಫ್’ ಯೋಜನೆಯಡಿ ಆರ್ಥಿಕವಾಗಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನೀಲೇಶ ಪಾಟೀಲ, ಭೂಷಣ ಮೋಹಿತೆ, ಚೈತನ್ಯ ಕುಲಕರ್ಣಿ, ಆರತಿ ಅಂಗಡಿ ಮತ್ತಿತರ ಪದಾಧಿಕಾರಿಗಳು ಶನಿವಾರ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದರು.
‘ಮುಂದೆಯೂ ನಾವು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆಗೆ ದಾಖಲಾಗಿದ್ದ ಸವದತ್ತಿ ತಾಲ್ಲೂಕಿನ ಕುಟರನಟ್ಟಿಯ ಹನುಮಂತ ಸರ್ವಿ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಅವರು ತಮ್ಮ ಅಂಗಾಂಗ ದಾನ ಮಾಡಿ ಇಬ್ಬರ ಜೀವ ಉಳಿಸಿದ್ದರು. ಆದರೆ, ಪತಿ ಕಳೆದುಕೊಂಡು ಗರ್ಭಿಣಿ ಪತ್ನಿ ಸಂಕಷ್ಟಕ್ಕೆ ಸಿಲುಕಿದ್ದರು.
ಹನುಮಂತ ಮೃತಪಟ್ಟ ಕೆಲ ದಿನಗಳಲ್ಲೇ ಎರಡು ವರ್ಷದ ಮಗಳಿಗೆ ಆರೋಗ್ಯ ಸಮಸ್ಯೆ ಕಾಡಿತು. ಕೆಎಲ್ಇ ಆಸ್ಪತ್ರೆಯ ಚಿಕ್ಕಮಕ್ಕಳ ಹೃದ್ರೋಗ ತಜ್ಞ ಡಾ.ವೀರೇಶ ಮಾನ್ವಿ ತಪಾಸಣೆಗೆ ಒಳಪಡಿಸಿದಾಗ, ಮಗುವಿನ ಹೃದಯದಲ್ಲಿ ರಂದ್ರ ಇರುವುದು ಕಂಡುಬಂತು. ಇದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ಅವರು ತಿಳಿಸಿದಾಗ, ಕುಟುಂಬ ಆಘಾತಕ್ಕೆ ಒಳಗಾಯಿತು.