ಚಾಮರಾಜನಗರ: “ನಮ್ಮನ್ನು ಜಗ್ಗಬಾರದು ಎಂದೇ ನಾವು ಅವರನ್ನು ಜಗ್ಗಿದ್ದೇವೆ” ಎಂದು ಹೇಳುವ ಮೂಲಕ ಆಪರೇಷನ್ ಹಸ್ತ ವಿಚಾರವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡರು.
ಚಾಮರಾಜನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬಿಜೆಪಿಗರು ಸುಮ್ಮನಿರುವವರಲ್ಲ. ಡಿಸ್ಟರ್ಬ್ ಮಾಡುತ್ತಲೇ ಇರುತ್ತಾರೆ. ರಾಜಕೀಯದಲ್ಲಿ ಇವೆಲ್ಲ ಇದ್ದಿದ್ದೇ” ಎಂದರು.
“ವಿವಿಧ ಪಕ್ಷಗಳಿಂದ 20 ಮಂದಿ ಕಾಂಗ್ರೆಸ್ಗೆ ಬರಲಿದ್ದಾರೆ. ಆಪರೇಷನ್ ಕಮಲ ಸಂಬಂಧ ಆಡಳಿತ ನಡೆಸುವವರಿಗೆ 24 ತಾಸು ಕೂಡ ಭಯ ಇದ್ದೇ ಇರುತ್ತದೆ” ಎಂದು ಹೇಳಿದರು. ಬಳಿಕ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿ, “ಲೆಟರ್ ಬರೆದವರ ವಿವರ ಇಲ್ಲ, ಪುರಾವೆ ಇಲ್ಲ, ಸತ್ಯವೇ ದೂರವಾದ ಸಂಗತಿಗಳು ಅವೆಲ್ಲ. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ” ಎಂದು ಹೇಳಿದರು.
ಮುಂದಿನ ಬಾರಿಯೂ ಕೇಂದ್ರದಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಮೋದಿ ವಿಶ್ವಾಸಕ್ಕೆ ಉತ್ತರಿಸಿ, “ಅವರ ಅಭಿಪ್ರಾಯ ಹೇಳಲು ಅವರು ಸ್ವತಂತ್ರರು. ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ” ಎಂದು ನುಡಿದರು.
‘ಬಾಂಬೆ ಬಾಯ್ಸ್ ಪರಿಸ್ಥಿತಿ ಅಯೋಮಯ’: ಕಾಂಗ್ರೆಸ್ ಕಚೇರಿಯಲ್ಲಿ ದೇವರಾಜ್ ಅರಸ್ ಜಯಂತಿಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, “ಬಾಂಬೆ ಬಾಯ್ಸ್ ಪರಿಸ್ಥಿತಿ ಎಡಬಿಡಂಗಿಗಳ ರೀತಿ ಆಗಿದೆ. ಬಿಜೆಪಿಯವರು ಎಲ್ಲಾ ಶಾಸಕರನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ” ಎಂದು ಕಿಡಿಕಾರಿದರು.
“ಬಾಂಬೆ ಬಾಯ್ಸ್ ಸ್ಥಿತಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದರು ಎನ್ನುವಂತಾಗಿದೆ. ತಾವು ತೋಡಿದ ಬಾವಿಗೆ ಬಿಜೆಪಿಗರು ತಾವೇ ಬಿದ್ದಿದ್ದಾರೆ. ಬಿಜೆಪಿಯವರು ತೋಡಿದ ಹಳ್ಳ ಅದಾಗಿತ್ತು. ಎಲ್ಲರ ದಿಕ್ಕು ತಪ್ಪಿಸಿ ಎಡಬಿಡಂಗಿತರ ಮಾಡಿದ್ದಾರೆ. ಬಡವರ ಪರವಾಗಿ ಇರೋದು ಕಾಂಗ್ರೆಸ್ ಪಕ್ಷ ಒಂದೇ” ಎಂದು ಹೇಳಿದರು.