ಬೆಂಗಳೂರು: ”ಕಾಂಗ್ರೆಸ್ನ ಡಬ್ಬಾ ಖಾಲಿಯಾಗಿದೆ ಮುಂದಿನ ಚುನಾವಣೆಗಾಗಿ ಡಬ್ಬಾ ತುಂಬಿಸಬೇಕಿದೆ. ಆ ಡಬ್ಬಾ ತುಂಬಿಸಲು ಇಂದು ಎಲ್ಲರನ್ನು ದೆಹಲಿಗೆ ಕರೆದು ವರ್ಗಾವಣೆ ದಂಧೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ವರ್ಗಾವಣೆ ದಂಧೆಯ ಪಾಲು ಮುಂದಿನ ಚುನಾವಣೆಯಲ್ಲಿ ಎಐಸಿಸಿಗೆ ಎಷ್ಟು ಎಂದು ಫಿಕ್ಸ್ ಮಾಡುವ ಕುರಿತು ಸಭೆ ನಡೆಯುತ್ತಿದೆ” ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ದೆಹಲಿ ಕಾಂಗ್ರೆಸ್ ಸಭೆಯನ್ನು ಟೀಕಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ”ದೆಹಲಿಯಲ್ಲಿ ಇಂದು ಎಐಸಿಸಿ ಸಭೆ ನಡೆಯುತ್ತಿದೆ. ರಾಜ್ಯದಿಂದ ಎಲ್ಲರನ್ನೂ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಈ ಸರ್ಕಾರ ಬಂದ ಮೊದಲ ದಿನದಿಂದ ಇಲ್ಲಿಯವರೆಗೆ ಮಾಡಿದ್ದು ಒಂದೇ ಕೆಲಸ ಗ್ಯಾರಂಟಿ ಬಗ್ಗೆ ಮಾತನಾಡಿದ್ದನ್ನು ಬಿಟ್ಟರೆ, ವರ್ಗಾವಣೆ ದಂಧೆ ಮಾತ್ರ ಮಾಡಿದ್ದಾರೆ. ಇವತ್ತು ಕೂಡ ಕಾಂಗ್ರೆಸ್ ಸಭೆ ನಡೆಯುತ್ತಿರುವುದು ಈ ದಂಧೆಯ ಪಾಲು ಮುಂದಿನ ಚುನಾವಣೆಯಲ್ಲಿ ಎಐಸಿಸಿಗೆ ಎಷ್ಟು ಎಂದು ಫಿಕ್ಸ್ ಮಾಡುವ ಸಭೆ ಇದಾಗಿದೆ. ಸಾವಿರಾರು ನೌಕರರು ಹಾಗೂ ಅಧಿಕಾರಿಗಳ ಪಟ್ಟಿ ಮಾಡಿ ವರ್ಗಾವಣೆ ಆದೇಶ ಮಾಡುತ್ತಿದ್ದಾರೆ. ಇವರು ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಈ ಸರ್ಕಾರ ಕೋಟ್ಯಂತರ ರೂ.ಗಳ ಸಂಗ್ರಹ ಮಾಡಿ ಮುಂದಿನ ಚುನಾವಣೆ ಎದುರಿಸಲು ಚಿಂತನೆ ನಡೆಸಿದೆ. ಅದಕ್ಕಾಗಿಯೇ ಇಂದು ವರ್ಗಾವಣೆ ದಂಧೆ ಕೆಲಸ ಮಾಡುತ್ತಿದ್ದಾರೆ. ಜನರಿಂದ ಕೇವಲ ಎರಡು ತಿಂಗಳಿನಲ್ಲಿ ಇಷ್ಟೊಂದು ಕೆಟ್ಟ ಹೆಸರು ಪಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು.