ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಎರಡು ಬಣಗಳಾಗಿ ಒಡೆದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆ ಬಗ್ಗೆ ಎದ್ದಿದ್ದ ತಕರಾರಿಗೆ ಚುನಾವಣಾ ಆಯೋಗ ಶುಕ್ರವಾರ ಅಂತ್ಯಹಾಡಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಶಿವಸೇನೆ ಎಂಬ ಪಕ್ಷದ ಹೆಸರು, ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ನೀಡಿ, ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.
ಇದರಿಂದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
2022 ರ ಜೂನ್ನಲ್ಲಿ ಏಕನಾಥ ಶಿಂಧೆ ಬಂಡಾಯವೆದ್ದಾಗ ಶಿವಸೇನೆ ಎರಡು ಬಣಗಳಾಗಿತ್ತು. ಶಿಂಧೆ ಬಂಡಾಯದ ಪರಿಣಾಮ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗಿ ಉದ್ಧವ್ ಠಾಕ್ರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಶಿಂಧೆಯವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ಅಭ್ಯರ್ಥಿಗಳ ಪೈಕಿ ಶೇ.76ರಷ್ಟು ಮಂದಿ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23 ಮಂದಿ ಮಾತ್ರ ಇದ್ದಾರೆ. ಹಾಗಾಗಿ ಏಕನಾಥ ಬಣಕ್ಕೆ ಶಿವಸೇನೆಯ ಚಿಹ್ನೆ ನೀಡಲಾಗಿದೆ ಎಂದು ಆಯೋಗ ಹೇಳಿದೆ. ಉದ್ಧವ್ ಠಾಕ್ರೆ ಬಣಕ್ಕೆ ಕಳೆದ ವರ್ಷ ನೀಡಲಾದ ‘ಉರಿಯುತ್ತಿರುವ ಜ್ಯೋತಿ’ ಚಿಹ್ನೆಯನ್ನು ಉಳಿಸಿಕೊಳ್ಳಲು ಆಯೋಗ ಅನುಮತಿ ನೀಡಿದೆ. ಇದಕ್ಕೂ ಮುಂಚೆ ಶಿಂಧೆ ಬಣಕ್ಕೆ ಎರಡು ಖಡ್ಗ ಮತ್ತು ಗುರಾಣಿ ಚಿಹ್ನೆ ನೀಡಲಾಗಿತ್ತು.
‘ನಮ್ಮ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಿಸಿದ್ದಕ್ಕೆ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಮಹತ್ವವಿದೆ. ಇದು ಅವರ (ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ) ಸಿದ್ಧಾಂತಕ್ಕೆ ಸಂದ ಜಯವಾಗಿದೆ. ನಮ್ಮದೇ ನಿಜವಾದ ಶಿವಸೇನೆಯಾಗಿದೆ’ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.
‘ಇಂತಹ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು. ನಮಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ’ ಎಂದು ಠಾಕ್ರೆ ಬಣದ ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಈ ನಿರ್ಧಾರವನ್ನು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ಅವರು ಹೇಳಿದ್ದಾರೆ.