ಪಣಜಿ: ಮಹದಾಯಿ ನಮಗೆ ತಾಯಿಯಷ್ಟೇ ಮುಖ್ಯ. ಗೋವಾದ ಅಸ್ಮಿತೆಯನ್ನು ಕಾಪಾಡಲು ಮತ್ತು ಅದನ್ನು ಎಲ್ಲಾ ರೀತಿಯಲ್ಲೂ ರಕ್ಷಿಸಲು, ದೇಶದ ಪರಿಣಿತ ಕಾನೂನು ತಜ್ಞರು ಮತ್ತು ಪರಿಸರವಾದಿಗಳ ಸಹಾಯದಿಂದ ಸುಪ್ರೀಂ ಕೋರ್ಟ್ನಲ್ಲಿ ಗೋವಾದ ಪರವನ್ನು ಬಲವಾಗಿ ಮಂಡಿಸಲಾಗುವುದು.
ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ನಿಯೋಗ ಭೇಟಿ ಮಾಡಲಿದೆ. ಮಹದಾಯಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸ್ಥಳೀಯ ಸುದ್ಧಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ- ಈ ಸಂದರ್ಭದಲ್ಲಿ ಮಹದಾಯಿ ರಕ್ಷಣೆಗೆ ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಮಂಡಿಸಿದ ಮುಖ್ಯಮಂತ್ರಿಗಳು, ಮಹದಾಯಿ ನಮ್ಮ ಅಸ್ಮಿತೆಯಾಗಿದ್ದು, ಅದರ ಸಂರಕ್ಷಣೆಗಾಗಿ ನಮ್ಮ ಶಕ್ತಿಮೀರಿ ಹೋರಾಡುತ್ತೇವೆ ಎಂದು ವಿವರಿಸಿದರು. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದ್ದು ಜನವರಿ 5 ರಂದು ವಿಚಾರಣೆ ನಡೆಯಲಿದೆ. ಈ ವಿಚಾರಣೆಯ ಸಮಯದಲ್ಲಿ, ಮಹದಾಯಿಗೆ ಸಂಬಂಧಿಸಿದ ವಿವರವಾದ ವಿಷಯಗಳನ್ನು ಮಂಡಿಸಲಾಗುವುದು ಎಂದರು.