ಬಹು ಸಂಸ್ಕೃತಿಯ ನಮ್ಮ ದೇಶದ ಪ್ರಾದೇಶಿಕ ಭಾಷೆಗಳ ರಕ್ಷಣೆಯ ದೃಷ್ಟಿಯಿಂದ ಭಾಷವಾರು ರಾಜ್ಯಗಳನ್ನಾಗಿ ವಿಭಾಗಿಸಲಾಗಿದೆ. ಆ ನಿಟ್ಟಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಬಳಸಿ, ಉಳಿಸಬೇಕಾಗಿದೆ” ಎಂದು ಹಿರಿಯ ಸಾಹಿತಿ ಪ್ರಾ. ಬಿ. ಎಸ್. ಗವಿಮಠ ಅಭಿಪ್ರಾಯ ಪಟ್ಟರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ನೃಪತುಂಗ ಯುವಕ ಮಂಡಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಗಡಿ ಕನ್ನಡ ತೇರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ” ಕರ್ನಾಟಕದ ಕಲ್ಪನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಲಿಂಗಾಯತ ಸಂಸ್ಥೆಗಳು ದಾಖಲಿಸಿದ್ದವು.
ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಹೋರಾಡಿದ ಅನೇಕ ಮಹನೀಯರನ್ನು ಸ್ಮರಿಸುತ್ತ ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ವಡಗಾವಿ, ಖಾಸಬಾಗ, ಭಾರತ ನಗರ ಚಳುವಳಿಯ ಶಕ್ತಿ ಕೇಂದ್ರವಾಗಿತ್ತು. ಹೋರಾಟದ ಕಲ್ಲೇಟು ತಿಂದವರಲ್ಲಿ ಅವರೇ ಹೆಚ್ಚಿದ್ದರು. ಇಂದಿಗೂ ವಡಗಾವಿ ಭಾಗದ ಜನರು ಕನ್ನಡದ ಅಸ್ಮಿತೆಯ ಉಳಿವಿಗೆ ಸದಾ ಮುಂದಿರುವುದು ಅನುಕರಣೀಯವಾಗಿದೆ. ಬೆಳಗಾವಿಯ ಇಂಥ ಕನ್ನಡ ಸಂಘ ಸಂಸ್ಥೆಗಳು ರಾಜ್ಯೋತ್ಸವ ಆಚರಿಸಲು ಕರ್ನಾಟಕ ಸರ್ಕಾರ ಅನುದಾನ ನೀಡಬೇಕು” ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಕನ್ನಡ ಹೋರಾಟಗಾರ, ಮಾಜಿ ನಗರ ಸೇವಕ ರಮೇಶ ಸೊಂಟಕ್ಕಿ ಮಾತನಾಡಿ, ” ಎಂಭತ್ತರ ದಶಕದಲ್ಲಿ ಗೋಕಾಕ ಚಳುವಳಿ, ಗಡಿ ಹೋರಾಟಗಳನ್ನು ಸ್ಮರಿಸುತ್ತಾ ಸಂಖ್ಯಾ ದೃಷ್ಟಿಯಿಂದ ಕಡಿಮೆ ಸಂಖ್ಯೆಯಲ್ಲಿ ಸೇರುತ್ತಿದ್ದರೂ ಅಂದಿನ ಹೋರಾಟಗಳ ಬಲ ಹೆಚ್ಚಿರುತ್ತಿತ್ತು. ಅದರ ಪರಿಣಾಮವೇ ಇಂದು ನೂರಾರು ಕನ್ನಡ ಸಂಘಟನೆಗಳು ಹುಟ್ಟಿ ಕನ್ನಡದ ಕಾಯಕ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ” ಎಂದು ಹೇಳಿದರು.