ಗೌರಿ-ಗಣೇಶ ಹಬ್ಬದ ಸಂಭ್ರಮವನ್ನು ಎದುರು ನೋಡು ತ್ತಿರುವಾಗಲೇ ರಾಜ್ಯದ ಹಲವೆಡೆ ಮಳೆ ಭೋರ್ಗರೆದು ಅನಾಹುತ ಸೃಷ್ಟಿಸಿದೆ. ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಪರಿಣಾಮ, ರಾಜ್ಯದಲ್ಲಿ ಮುಂದಿನ 3ರಿಂದ 4 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಮನಗರ ಜಿಲ್ಲೆಯ ಮೂಲಕ ಹಾದು ಹೋಗುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಬಸ್, ದೊಡ್ಡ ಕಂಟೈನರ್ ವಾಹನಗಳು ಮುಳುಗುವಷ್ಟು ನೀರು ನಿಂತಿದೆ. ಹಲವು ವಾಹನಗಳು ಬಹುತೇಕ ಮುಳುಗಡೆಯಾಗಿದ್ದವು. ಬಿಳಗುಂಬ ಸಮೀಪ ಇರುವ ಅಂಡರ್ ಪಾಸ್ನಲ್ಲಿ ಖಾಸಗಿ ಬಸ್ ನೀರಿನಲ್ಲಿ ಸಿಲುಕಿತ್ತು. ಅದರಲ್ಲಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಗ್ಲಾಸ್ ಒಡೆದು ಸ್ಥಳೀಯರು ರಕ್ಷಿಸಿದ್ದಾರೆ.
ಬಿಡದಿಯ ತೊರೆದೊಡ್ಡಿಯಲ್ಲಿ ಬೃಹತ್ ಆಲದಮರ ಕಾರಿನ ಮೇಲೆ ಉರುಳಿ ಬಿದ್ದು ಬೋರೆಗೌಡ(50) ಅಸುನೀಗಿದ್ದಾರೆ. ಧಾರವಾಡದ ಬೆಣ್ಣೆಹಳ್ಳದಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ. ನಾಲ್ವರು ಯುವಕರು ಇಂಗಳಹಳ್ಳಿಗೆ ತೆರಳುವ ವೇಳೆ ಸ್ಥಳೀಯರ ಎಚ್ಚರಿಕೆಯನ್ನು ಲೆಕ್ಕಿಸದೇ ಹಳ್ಳ ದಾಟಲು ಮುಂದಾದರು. ಈ ಸಂದರ್ಭ ಇಬ್ಬರು ಈಜಿ ದಡ ಸೇರಿದ್ದರೆ, ಇನ್ನಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಒಬ್ಬ ಗಿಡವೊಂದನ್ನು ಹಿಡಿದುಕೊಂಡು ಪಾರಾಗಿದ್ದಾನೆ.