ಬೆಂಗಳೂರು: ಮಾನವ ಗುರು ಎಂದೇ ಟಿವಿ ವಾಹಿನಿಗಳಲ್ಲಿ ಹೆಸರು ಮಾಡಿರುವ ಸರಳ ವಾಸ್ತು ಮುಖ್ಯಸ್ಥ ಚಂದ್ರಶೇಖರ್ ಗುರೂಜಿ ಕೊಲೆ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಈಗ ಈ ವಾಸ್ತು ಗುರುವಿನ ಹಿನ್ನೆಲೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಚಂದ್ರಶೇಖರ್ ಗುರುಜಿ ಸೇನೆ ಸೇರಬೇಕೆಂಬ ಉದ್ದೇಶಕ್ಕೆ ಬೆಳಗಾವಿಗೆ ಬಂದು ಪ್ರಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಸಿವಿಲ್ ಎಂಜಿನಿಯರಿಂಗ್ ಹಿನ್ನೆಲೆಯ ಚಂದ್ರಶೇಖರ ಗುರೂಜಿ ಆ ಬಳಿಕ ಮುಂಬಯಿಗೆ ತೆರಳಿ ಅಲ್ಲಿನ ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅದೇ ಅವರ ಕರ್ಮ ಭೂಮಿಯಾಯ್ತು. ಈ ಅವಧಿಯಲ್ಲೇ ಅವರಿಗೆ ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶ್ಯೂ ಬಗ್ಗೆ ಮಾಹಿತಿ ಲಭ್ಯವಾಯಿತು. ಇದರಲ್ಲಿ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದ ಅವರು ಪೆಂಗ್ ಶ್ಯೂ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪುರಕ್ಕೆ ತೆರಳಿ ಆರು ವರ್ಷಗಳ ಕಾಲ ಅಧ್ಯಯನ ನಡೆಸಿದ್ದರು.
ನಂತರ ಕರ್ನಾಟಕಕ್ಕೆ ಆಗಮಿಸಿದ ಅವರು ಸರಳವಾಸ್ತು ಸಂಸ್ಥೆ ಆರಂಭಿಸಿದರು. ಇದರ ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರು. ರಾಜ್ಯದ ಕೆಲವು ಪ್ರತಿಷ್ಠಿತ ರಾಜಕಾರಣಿಗಳ ಜತೆಗೂ ಅವರ ಸಂಪರ್ಕವಿತ್ತು. ಅವರು ರಾಜಕಾರಣಿಗಳ ಕಪ್ಪು ಹಣ ಬದಲಾಯಿಸುತ್ತಾರೆ ಎಂಬ ಆರೋಪವೂ ಆಗಾಗ ಕೇಳಿ ಬಂದಿತ್ತು. ರಾಜ್ಯ ಸಚಿವ ಸಂಪುಟದ ಪ್ರಭಾವಿ ಸಚಿವರಿಗೆ ಅವರು ಆತ್ಮೀಯರಾಗಿದ್ದರು ಎಂಬ ಮಾತುಗಳೂ ಕೇಳಿ ಬಂದಿದೆ. ಈ ಹತ್ಯೆಯ ಹಿಂದೆ ‘ಹೆಣ್ಣು ಅಥವಾ ಮಣ್ಣು’ ಸಂಬಂಧಿತ ವ್ಯಾಜ್ಯ ಇದ್ದಿರಬಹುದು ಎಂಬ ಮಾತುಗಳು ಕೇಳಿ ಬಂದಿದೆ.