ಮಂಗಳೂರು: ರಾಜ್ಯದಲ್ಲಿ ತಾ.ಪಂ., ಜಿ.ಪಂ.ನ ಆಡಳಿತ ಅವಧಿ ಮುಗಿದು ವರ್ಷ ಕಳೆದಿದ್ದು ಸರಕಾರ ಕೂಡಲೇ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರದ ರಾಜಧಾನಿಯಾಗಿದೆ. ಕರ್ನಾಟಕ. ಶೇ. 40 ಕಮಿಷನ್ ಜಗಜ್ಜಾಹೀರು ಆಗಿದ್ದು ರಾಜ್ಯದ ಜನ ತಲೆತಗ್ಗಿಸುವಂತಾಗಿದೆ ಎಂದರು.
ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಹಾಗೂ ಇದರ ವಿರುದ್ಧ ಹೋರಾಟದ ಕಾರ್ಯವನ್ನು ಕಾಂಗ್ರೆಸ್ ಮಾಡಲಿದೆ. ಜನತೆ ಬದಲಾವಣೆ ಬಯಸಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು. ಪಠ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟಿರುವುದನ್ನು ಖಂಡನೀಯ ಎಂದದರು.
1,14,975 ಸದಸ್ಯತ್ವ
ರಾಜ್ಯದಲ್ಲಿ 76 ಲಕ್ಷ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 1,14,975 ಸದಸ್ಯತ್ವ ನೋಂದಣಿಯಾಗಿದೆ. ಮೇ 28ಕ್ಕೆ ಬೂತ್ ಸಮಿತಿ ಪೂರ್ಣಗೊಳ್ಳಲಿದೆ ಎಂದರು. ಪ್ರಮೋದ್ ಮಧ್ವರಾಜ್, ಬಸವರಾಜ ಹೊರಟ್ಟಿ ಕಾಂಗ್ರೆಸ್ನಿಂದ ಎಲ್ಲ ಪಡೆದಿದ್ದರೂ ಅಧಿಕಾರದ ಆಸೆಯಿಂದ ಪಕ್ಷ ತೊರೆದಿದ್ದಾರೆ. ಮುಂದೆ ಪಶ್ಚಾತ್ತಾಪ ಪಡಬಹುದು ಎಂದರು.
ಚಿಂತನ ಮಂಥನ ಸಭೆ
ಪಕ್ಷ ಸಂಘಟನೆ ಕುರಿತು ಜೂನ್ 2ನೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಪಿಸಿಸಿ ವತಿಯಿಂದ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು ಸೇರಿದಂತೆ ಸುಮಾರು 200 ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್ ಲೋಬೋ, ಮುಖಂಡರಾದ ಟಿ.ಕೆ. ಸುಧೀರ್, ನೀರಜ್ ಪಾಲ್, ಶಾಹುಲ್ ಹಮೀದ್, ನಝೀರ್ ಬಜಾಲ್ ಉಪಸ್ಥಿತರಿದ್ದರು.