ಬೆಂಗಳೂರು,ಮೇ2- ಯಾವುದೇ ಕಾರಣಕ್ಕೂ ಕರ್ನಾಟಕದ ಒಂದೇ ಒಂದು ಇಂಚು ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಅನೇಕ ಪ್ರದೇಶಗಳಿದ್ದು, ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಾವು ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಅಜಿತ್ ಪವಾರ್ ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಬೊಮ್ಮಾಯಿ ಅವರು ರಾಜಕೀಯ ಉಳಿವಿಗಾಗಿ ಭಾಷೆ, ಗಡಿ ವಿಚಾರಗಳನ್ನು ಎತ್ತುವುದು ಅತ್ಯಂತ ಸಣ್ಣತನ. ಕರ್ನಾಟಕದಲ್ಲಿ ಮರಾಠಿ ಭಾಷಿಕರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಅವರ ಹೇಳಿಕೆ ಬಾಲಿಷತನವಾಗಿದೆ ಎಂದು ವ್ಯಂಗ್ಯವಾಡಿದರು.
ಮಹಾರಾಷ್ಟ್ರದಲ್ಲೂ ಅನೇಕ ಕಡೆ ಕನ್ನಡ ಮಾತನಾಡುವ ಪ್ರದೇಶಗಳಿವೆ. ಅವುಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕೆಂದು ನಾವು ಯೋಚನೆ ಮಾಡುತ್ತಿದ್ದೇವೆ. ನಿಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಭಾಷೆ ವಿವಾದ ಹುಟ್ಟು ಹಾಕಬೇಡಿ ಎಂದು ಎಚ್ಚರಿಸಿದರು.
ಮಹಾರಾಷ್ಟ್ರದಲ್ಲಿ ಯಾವಾಗ ಅಲ್ಲಿನ ರಾಜಕಾರಣ ಇಕ್ಕಟ್ಟಿಗೆ ಸಿಲುಕುತ್ತದೆಯೋ ಅವರು ಗಡಿ ವಿವಾದ ಕ್ಯಾತೆ ತೆಗೆಯುತ್ತಾರೆ. ಇದು ಹೊಸದೇನೂ ಅಲ್ಲ. ಇದರ ಬಗ್ಗೆ ಚರ್ಚೆಯೇ ಅನಗತ್ಯ ಎಂದು ಹೇಳಿದರು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುಗಿದು ಹೋದ ಅಧ್ಯಾಯ.
ಈ ಸಮಸ್ಯೆ ಬಗೆಹರಿದು ದಶಕಗಳೇ ಕಳೆದಿವೆ. ಈಗಾಗಲೇ ಇದರ ಬಗ್ಗೆ ನಿರ್ಣಯವಾಗಿರುವುದರಿಂದ ಪುನಃ ಇದರ ಬಗ್ಗೆ ಚರ್ಚೆ ಬೇಡ ಎಂದು ಬೊಮ್ಮಾಯಿ ಅವರು ಮನವಿ ಮಾಡಿದರು. ಪದೇ ಪದೇ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಸೌಹಾರ್ದವನ್ನು ಕೆಣಕಬೇಡಿ