ಬಾಗಲಕೋಟೆ : ಯಾರೇ ಪಕ್ಷ ಸೇರಿದರೂ ಸ್ವಾಗತ. ಆದರೆ, ಯಾವುದೇ ಷರತ್ತುಗಳು ಹಾಕುವಂತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು. ಇದಕ್ಕೆಲ್ಲಾ ಸಿದ್ಧವಾಗಿದ್ದರೆ ಮಾತ್ರ ಪಕ್ಷಕ್ಕೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಸೇರಲು ಬಿಜೆಪಿ ಮತ್ತು ಜೆಡಿಎಸ್ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಮಾತ್ರ ಹೇಳಲ್ಲ. ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ. ವಿಧಾನಸಭೆಗೂ ರೆಡಿ ಇದ್ದೇವೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೂ ಸಿದ್ಧರಿದ್ದೇವೆ ಎಂದರು.
ಜನರ ಅಹವಾಲು ಸ್ವೀಕಾರ
ಇದಕ್ಕೂ ಮೊದಲು ಖಾಸಗಿ ಹೋಟೆಲ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಕ್ಷೇತ್ರದ ವಿವಿಧ ಪ್ರದೇಶಗಳಿಂದ ಆಗಮಿಸಿದ ಜನರು, ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ಮಾಜಿ ಸಿಎಂ ಬಳಿ ಮನವಿ ಮಾಡಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಹೂವಿನ ಹಾರ ಹಾಕಲು ಬಂದ ಅಭಿಮಾನಿಗಳಿಂದ ಹಾರ ತೆಗೆದುಕೊಂಡು ಮರಳಿ ಅವರಿಗೇ ಹಾಕಿ ಗಮನ ಸೆಳೆದರು.