ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ನೋವನ್ನು ಅಭಿಮಾನಿಯಾಗಿ ನನಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲ ಅಭಿಮಾನಿಗಳಿಗೂ ಕೂಡ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ ವಿಧಿಯಾಟದ ಎದುರು ಯಾರೂ ಏನೂ ಮಾಡಲು ಆಗುವುದಿಲ್ಲ. ಎಲ್ಲರೂ ಶಾಂತ ರೀತಿಯಿಂದ ಇರ್ರಿ, ಪುನೀತ್ ರಾಜ್ಕುಮಾರ್ ಅವರು ಎಲ್ಲಿಯೂ ಹೋಗಿಲ್ಲ. ಅವರು ನಮ್ಮ ನಿಮ್ಮ ಮಧ್ಯದಲ್ಲಿಯೇ ಇದ್ದಾರೆ. ಅವರ ಒಳ್ಳೆಯ ಕಾರ್ಯಗಳು, ಗುಣ, ಸಂಸ್ಕøತಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅವರು ಅಸ್ತಂಗತವಾಗಿಲ್ಲ, ಅಮರರಾಗಿದ್ದಾರೆ ನಮ್ಮ ಜೊತೆಯೇ ಇದ್ದಾರೆ ಎಂದು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತೀವ್ರ ಸಂತಾಪ ಸೂಚಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅತ್ಯಂತ ದುಃಖದಿಂದ ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ. ನಾವೆಲ್ಲಾ ಕೂಡ ಬಹಳಷ್ಟು ಶಾಕ್ನಲ್ಲಿದ್ದೇವೆ. ಅಲ್ಲದೇ ಅವರ ಅಭಿಮಾನಿಗಳಾಗಿ ನಾವು ಬಹಳಷ್ಟು ನೋವಿನಲ್ಲಿದ್ದೇವೆ. ಇನ್ನು ಈ ಸುದ್ದಿಯನ್ನು ಕೇಳಿ ನಮ್ಮ ಗ್ರಾಮೀಣ ಕ್ಷೇತ್ರದ ಶಿಂಧೊಳ್ಳಿಯಲ್ಲಿ ಪರಶುರಾಮ್ ಎಂಬ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದೇ ರೀತಿ ಅಥಣಿಯಲ್ಲಿ ಯುವಕನೊರ್ವ ನೇಣಿಗೆ ಶರಣಾಗಿರುವ ಬಗ್ಗೆ ಕೇಳಿದ್ದೇನೆ. ದಯವಿಟ್ಟು ಎಲ್ಲರೂ ಶಾಂತ ರೀತಿಯಿಂದ ಇರ್ರಿ, ಪುನೀತ್ ಅವರು ಎಲ್ಲಿಯೂ ಹೋಗಿಲ್ಲ, ನಮ್ಮ ಜೊತೆಯೇ ಇದ್ದಾರೆ ಎಂದು ಅಪ್ಪು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.
ಇನ್ನು ದೊಡ್ಮನೆ ಹುಡುಗ ಸಿನಿಮಾ ಸಂದರ್ಭದಲ್ಲಿ ಅಕ್ಕಾ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಬಂದಿದ್ದರು. ಈ ವೇಳೆ ಅತ್ಯಂತ ಪ್ರೀತಿಯಿಂದ ನಾವು ಬರಮಾಡಿಕೊಂಡಿದ್ದೇವು. ಪುನೀತ್ ರಾಜ್ಕುಮಾರ್ ಅವರ ಎಲ್ಲ ಸಿನಿಮಾಗಳನ್ನು ನಾನು ಮತ್ತು ನಮ್ಮ ಕುಟುಂಬದವರು ನೋಡಿದ್ದೇವು. ಅವರ ಸಿನಿಮಾದಲ್ಲಿ ವಿಶೇಷ ಸಾಮಾಜಿಕ ಕಳಕಳಿ, ಸಂದೇಶ ಕೊಡುತ್ತಿದ್ದರು. ನಮ್ಮ ತಾಯಿಗೆ ಮಗನಂತೆಯೇ ಇದ್ದರು. ಕಾಫಿ ಕುಡಿಯಲು ಮನೆಗೆ ಬರುತ್ತೇನೆ ಎಂದು ಹೇಳಿ ಬಂದಾಗ ನಮಗೆ ಸಂತೋಷ ಆಗಿತ್ತು. ನಮ್ಮ ತಾಯಿ ಸೇರಿ ಎಲ್ಲರ ಜೊತೆಗೆ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡಿದ್ದರು. ಒಂದು ಚೂರು ಕೂಡ ಅಹಂ ಆಗಲಿ, ಅಹಂಕಾರ ಆಗಲಿ, ಅಷ್ಟು ದೊಡ್ಡ ಮನೆತನದ ಮಗ, ಸೂಪರ್ ಸ್ಟಾರ್, ಯುವಕರ ಕಣ್ಮನಿ ಎಂದು ನಮಗೆ ಅನಿಸುತ್ತಿರಲಿಲ್ಲ, ನಮ್ಮ ಮನೆಯ ಮಗ, ನಮ್ಮ ತಮ್ಮ ಎಂದು ಅನಿಸುತ್ತಿತ್ತು.